ರಾತ್ರಿಯಿಡೀ ಚಳಿಯಲ್ಲಿ ನಡುಗಿದ ಯಾತ್ರಿಗಳು
ವಿಜಯಸಾಕ್ಷಿ ಸುದ್ದಿ, ಗದಗ
ಗದಗ ನಗರದ 23 ಜನ ಯಾತ್ರಿಕರು ಸೇರಿದಂತೆ ರಾಜ್ಯದ 300 ಜನರು ಅಮರನಾಥದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಅವರೆಲ್ಲರೂ ಸುರಕ್ಷಿತ ಸ್ಥಳದಲ್ಲಿ ಇದ್ದು, ಸಂಜೆ ಶ್ರೀ ನಗರಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.
ಗದಗ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾತ್ರಿಯಿಡೀ ಚಳಿಯಿಂದ ಯಾತ್ರಿಕರು ನಡುಗಿದ್ದು, ಯಾವುದೇ ಆರೋಗ್ಯ ಸಮಸ್ಯೆ ಆಗಿಲ್ಲ ಎಂದರು.
ಸೇನೆ ಅಮರನಾಥ ದೇವಸ್ಥಾನ ಆಡಳಿತ ಮಂಡಳಿ ಯಾತ್ರಿಗಳ ಬಗ್ಗೆ ಕಾಳಜಿ ವಹಿಸಿದೆ. ಪಂಚರ್ತನಿಯಲ್ಲಿ ಸದ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಈಗಾಗಲೇ ವಿಶಾಲ್ ಹಾಗೂ ವಿನೋದ ಎನ್ನುವರ ಜೊತೆಗೆ ಮಾತಾಡಿದ್ದೇನೆ. ಅವರ ಸಂಬಂಧಿಕರ ಜೊತೆಗೆ ಮಾತಾಡಿದ್ದೇನೆ ಎಂದು ಸಚಿವರು ಹೇಳಿದರು.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಸಿಎಂ ಜೊತೆಗೆ ಮಾತಾಡಿದ್ದೇನೆ ಎಂದರು.
ಹಿರಿಯ ಅಧಿಕಾರಿಗಳ ತಂಡ ಯಾತ್ರಿಗಳ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ. ಇವತ್ತು ಹವಾಮಾನ ಸುಧಾರಣೆ ಆದ ನಂತರ ಹೆಲಿಕಾಪ್ಟರ್ ಮೂಲಕ ಪಂಚತರ್ನಿಯಿಂದ ನೀಲಗ್ರತ್ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಭಯದ ವಾತಾವರಣದಿಂದ ಯಾತ್ರಿಗಳು ಹೊರಗೆ ಬಂದಿದ್ದು, ಸಂಜೆ ಸುರಕ್ಷಿತ ಸ್ಥಳಕ್ಕೆ ಬರಲಿದ್ದಾರೆ ಎಂದ ಅವರು, ಸಂಜೆ ಹೆಲಿಕಾಪ್ಟರ್ ಮೂಲಕ ಶ್ರೀ ನಗರಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ಗದಗ ಜಿಲ್ಲೆಯ ಯಾತ್ರಿಗಳ ಜೊತೆಗೆ ಜಿಲ್ಲಾಡಳಿತ ನಿರಂತರವಾಗಿ ಸಂಪರ್ಕದಲ್ಲಿ ಇದ್ದು, ಬೆಂಗಳೂರು ಮೂಲದ ರಾಜೇಂದ್ರ ಎಂಬುವರಿಗೆ ಆರೋಗ್ಯದಲ್ಲಿ ಏರುಪೇರು ಆಗಿತ್ತು, ಅವರಿಗೆ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.