ಕೆಲಕಾಲ ಗೊಂದಲಕ್ಕೀಡಾದ ಪಲಾನುಭವಿಗಳು
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಬಂದಿವೆ ಎಂಬ ತಪ್ಪು ಮಾಹಿತಿ ಹರಡುವಿಕೆಯಿಂದಾಗಿ ಗುರುವಾರ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಫಲಾನುಭವಿಗಳು ಆತಂಕಕ್ಕೀಡಾದ ಪ್ರಸಂಗ ನಡೆಯಿತು. ಪಡಿತರ ಅಕ್ಕಿಯಲ್ಲಿ ಸೌತೆಬೀಜದಂತಹ ಅಕ್ಕಿ ಕಂಡು ಬಂದ ಹಿನ್ನೆಲೆ ಇದು ಪ್ಲಾಸ್ಟಿಕ್ ಅಕ್ಕಿಯೇ ಎಂಬ ಅನುಮಾನ ಹರಡಿ ಪಡಿತರ ಪಡೆಯಲು ಸಾಲುಗಟ್ಟಿ ನಿಂತ ಫಲಾನುಭವಿಗಳು ಪರಸ್ಪರ ಆಂತಕದಿಂದ ಮಾತನಾಡಿಕೊಂಡರು.

ಈ ಸುದ್ದಿ ತಿಳಿದ ಆಹಾರ ನಿರೀಕ್ಷಕ ಜಗದೀಶ ಕುರುಬರ, ಮಂಜುಳಾ ಆಕಳದ ಸ್ಥಳಕ್ಕೆ ಆಗಮಿಸಿ ನೆರೆದ ಜನರನ್ನುದ್ದೇಶಿಸಿ ಮಾತನಾಡಿ, ಜನಸಾಮಾನ್ಯರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಸಾರಯುಕ್ತ ಅಕ್ಕಿ ವಿತರಣೆ ಮಾಡುತ್ತಿದೆ. ಪ್ರತಿ ೫೦ ಕೆಜಿ ಅಕ್ಕಿಯ ಚೀಲದಲ್ಲಿ ಅರ್ಧ ಕೆಜಿಯಷ್ಟು ಪೋಷಕಾಂಶ (ವಿಟಾಮಿನ್ ಎ ಮತ್ತು ಡಿ, ಐರನ್, ಫೋಲಿಕ್ ಆಸಿಡ್, ಬಿ ಕಾಂಪ್ಲೆಕ್ಸ್, ಜಿಂಕ್ ಹಾಗೂ ಐಯೋಡಿನ್) ಭರಿತ ಸಾರವರ್ಧಿತ ಅಕ್ಕಿ ಬೆರೆಸಿ ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಾರವರ್ಧಿತಗೊಳಿಸಿರುವ (ಪೋರ್ಟಿಫೈಡ್) ಅಕ್ಕಿಯಲ್ಲಿ ಕೆಲವೊಂದು ಅಕ್ಕಿಯ ಕಾಳುಗಳು ನೆನೆದು ಉಬ್ಬಿದ ರೀತಿಯಲ್ಲಿರುವುದು ಆತಂಕ ಮೂಡಿಸುತ್ತದೆ. ಆದರೆ ಇದು ರಕ್ತಹೀನತೆ, ಅಪೌಷ್ಟಿಕತೆ ನಿವಾರಣೆ. ಮಧುಮೇಹ, ಬಿಪಿಯಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗರ್ಭಿಣಿಯರಿಗೆ, ಬಾಣಂತಿ ಮಹಿಳೆಯರಿಗೆ, ಚಿಕ್ಕಮಕ್ಕಳಿಗೆ ಈ ಪಡಿತರ ಅಕ್ಕಿ ಪೌಷ್ಟಿಕತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹವನ್ನು ತಂಪಾಗಿಡುತ್ತದೆ ಯಾರೂ ಆತಂಕಕ್ಕೀಡಾಬಾರದು. ಈ ಬಗ್ಗೆ ನ್ಯಾಯಬೆಲೆ ಅಂಗಡಿಯವರಿಗೆ ಮತ್ತು ಫಲಾನುಭವಿಗಳಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
