ವಿಜಯಸಾಕ್ಷಿ ಸುದ್ದಿ, ಗದಗ
ಕುಮಾರಸ್ವಾಮಿಗಳ ಜೀವನವನ್ನು ಆಧರಿಸಿದ ‘ವಿರಾಟಪುರ ವಿರಾಗಿ’ ಸಿನಿಮಾ ಶುಕ್ರವಾರ ದೇಶದಾದ್ಯಂತ ಬಿಡುಗಡೆಯಾಗಲಿದೆ ಎಂದು ತೋಂಟೇಶ್ ಮಾನ್ವಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿ ಮಾತನಾಡಿ, ನಗರದಲ್ಲಿ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ದೇಶದ ವಿವಿಧ ಚಿತ್ರಮಂದಿರಗಳಲ್ಲಿ ವಿರಾಟಪುರ ವಿರಾಗಿ ಚಲನಚಿತ್ರ ಬಿಡುಗಡೆಯಾಗಲಿದೆ ಎಂದರು.
ವಿರಾಟಪುರ ವಿರಾಗಿ ಸಿನಿಮಾದ ಮಣಿಕಾಂತ ಕದ್ರಿ ಸಂಗೀತ ಸಂಯೋಜನೆಯ, ರವೀಂದ್ರ ಸೋರಗಾಂವಿ ಅವರ ಧ್ವನಿಯಲ್ಲಿ ಮೂಡಿಬಂದ ‘ನೋಡಲಾಗದೆ ದೇವಾ’ ಹಾಡು ಕೂಡ ಬಿಡುಗಡೆ ಆಗಿದ್ದು, ಅಪಾರ ಸಂಖ್ಯೆಯ ಕೇಳುಗರು ಈ ಗೀತೆಯನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಇಂದು ಹೆಚ್ಚಿನ ಪ್ರಮಾಣದಲ್ಲಿ ಜನರು ವಿರಾಟಪುರ ವಿರಾಗಿ ಚಲನಚಿತ್ರ ಗೀತೆಗಳನ್ನು ನೋಡಲು ಮುಂದಾಗಿದ್ದಾರೆ ಎಂದರು.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಸುಚೇಂದ್ರಪ್ರಸಾದ್ ಸೇರಿದಂತೆ ಹಲವು ಕಲಾವಿದರು ಮತ್ತು ಮಠಾಧೀಶರು ಕೂಡ ತಾರಾಗಣದಲ್ಲಿ ಇದ್ದಾರೆ. ಸಮಾಧಾನ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಹಾನಗಲ್ಲ ಶ್ರೀಗಳ ಭವ್ಯ ಚರಿತ್ರೆಯನ್ನು ಈ ಸಿನಿಮಾ ಒಳಗೊಂಡಿದೆ ಎಂದರು.
ಹಾನಗಲ್ಲ ಕುಮಾರ ಶಿವಯೋಗಿಗಳ ಚಿತ್ರವನ್ನು ಉತ್ತರ ಕರ್ನಾಟಕ ಭಾಗದ ಅನೇಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮಶೇಖರ್ ಹೊನಗುಡಿ, ಕುಮಾರಸ್ವಾಮಿ ಹಿರೇಮಠ, ಶಿವಾನಂದ ಹಿರೇಮಠ ಇದ್ದರು.