ನರೇಗಾ ಹಣ ದುರ್ಬಳಕೆ ಆರೋಪ ಸಾಬೀತು; ಗ್ರಾ.ಪಂ. ಅಧ್ಯಕ್ಷ, ಪಿಡಿಓಗೆ ಹಣ ಭರಿಸಲು ಆದೇಶ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಶಿಗ್ಲಿ ಗ್ರಾಮ ಪಂಚಾಯತಿಯ ನರೇಗಾ ಕಾಮಗಾರಿಯಲ್ಲಿನ ಅವ್ಯವಹಾರದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಗ್ರಾಪಂ ಅಧ್ಯಕ್ಷ ಅಶೋಕಯ್ಯ ಮುಳಗುಂದಮಠ ಮತ್ತು ಪಿಡಿಓ ಬಿ.ಟಿ. ಅಮ್ಮನವರ ಅವರಿಗೆ ದುರುಪಯೋಗ ಆಗಿರುವ 6,73,000 ರೂ ಹಣ ಮರುಪಾವತಿಸುವಂತೆ ಮತ್ತು ಕಾನೂನು ಕ್ರಮ ಕೈಗೊಳ್ಳುವಂತೆ ಜಿಪಂ ನರೇಗಾ ಯೋಜನೆಯ ಓಂಬುಡ್ಸ್ಮನ್ ಸಿ.ಪಿ. ಹಿರೇಮಠ ಆದೇಶಿಸಿದ್ದಾರೆ.

ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯಿತಿಯಲ್ಲಿ ಸನ್ 2021-22ನೇ ಸಾಲಿನ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ಮತ್ತು ಹಣ ದುರುಪಯೋಗ ನಡೆದಿದೆ ಎಂದು ಗ್ರಾಪಂ ಅಧ್ಯಕ್ಷರು, ಪಿಡಿಓ ಮತ್ತು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಗ್ರಾಪಂ ನೌಕರ ಮತ್ತು ನರೇಗಾ ಇಂಜಿನಿಯರ ವಿರುದ್ಧ ಜಿಲ್ಲಾ ಪಂಚಾಯಿತಿಗೆ ದೂರು ಸಲ್ಲಿಸಲಾಗಿತ್ತು.

ಗ್ರಾಮದ ಅಮಾತಪ್ಪ ಹರವಿ, ಸುರೇಶ ಸ್ವಾದಿ, ಸಂತೋಷ ಮಾದನಹಳ್ಳಿ ಅವರು ದಾಖಲೆಗಳ ಸಮೇತ ದೂರು ಸಲ್ಲಿಸಿದರು. ದೂರಿನಲ್ಲಿ 2021-22ನೇ ಸಾಲಿನಲ್ಲಿ ಕೈಗೊಂಡ ಬದು ನಿರ್ಮಾಣ ಕಾರ್ಯದಲ್ಲಿ ಎನ್‌ಆರ್‌ಇಜಿ ಜಾಬ್ ಕಾರ್ಡ್ ಇದ್ದರೂ ಇಲ್ಲದವರ ಹೆಸರಿನಲ್ಲಿ ಎನ್‌ಎಂಆರ್ ಹಾಕಿ ಲಕ್ಷಾಂತರ ರೂ ಅವ್ಯವಹಾರ ಮಾಡಿದ್ದಾರೆ. ಇದರಲ್ಲಿ ಪಿಡಿಓ, ಅಧ್ಯಕ್ಷರು, ಪಂಚಾಯತಿ ಸಿಬ್ಬಂದಿ ಹಾಗೂ ಕೃಷಿ ಇಲಾಖೆ ಅಧಿಕಾರಿ ಸೇರಿ ಒಟ್ಟು 253 ಕೂಲಿಕಾರರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಹಣ ದುರುಪಯೋಗ ಮತ್ತು ಅವ್ಯವಾರ ಮಾಡಲಾಗಿದೆ.

ಇದರಲ್ಲಿ ಪಿಡಿಓ ಬಿ.ಟಿ. ಅಮ್ಮನವರ ಮತ್ತು ಗ್ರಾಪಂ ಅಧ್ಯಕ್ಷ ಅಶೋಕಯ್ಯ ಮುಳುಗುಂದಮಠ ಸೇರಿಕೊಂಡು ಕೆಲಸಕ್ಕೆ ಹೋಗಲಾರದವರ ಹೆಸರಿನಲ್ಲಿ ಹಣ ತೆಗೆದಿದ್ದಾರೆ ಎಂದು ಜಿಲ್ಲಾ ಪಂಚಾಯಿತಿಗೆ 2022ರ ಫೆಬ್ರವರಿ 16ರಂದು ದೂರು ಸಲ್ಲಿಸಲಾಗಿತ್ತು.

ಆದಾಗ್ಯೂ ಸಹಿತ ಹಾರಿಕೆ ಉತ್ತರ ಕೊಟ್ಟು ಸಂಬಂಧಪಟ್ಟ ದಾಖಲೆಗಳನ್ನು ಸಹ ಸರಿಯಾಗಿ ನೀಡಲು ಹಿಂದೇಟು ಹಾಕಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದರು ಎಂದು ಹೇಳಲಾಗುತ್ತದೆ.

ಆದರೆ ಜಿಲ್ಲಾ ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಇಲಾಖೆಯು ದೂರಿನ ಹಿನ್ನೆಲೆಯಲ್ಲಿ ಓಂಬಡ್ಸಮನ್ ನೇಮಕವಾಗಿ ಅವ್ಯವಹಾರದ ತನಿಖೆಯನ್ನು ಬೆನ್ನು ಹತ್ತಿದಾಗ ಒಟ್ಟು 6,73,000 ರೂ ದುರುಪಯೋಗವಾಗಿರುವ ಸತ್ಯ ಹೊರಬಿದ್ದಿದೆ.

ಅದಕ್ಕೆ ಪಿಡಿಒ ಬಿ.ಟಿ.ಅಮ್ಮನವರ ಮತ್ತು ಗ್ರಾಪಂ ಅಧ್ಯಕ್ಷ ಅಶೋಕಯ್ಯ ಮುಳುಗುಂದಮಠ ಮೇಲೆ ಕರ್ತವ್ಯ ಲೋಪ ಮತ್ತು ಹಣ ದುರುಪಯೋಗ ಹೊಣೆಗಾರನಾಗಿಸಲಾಗಿದೆ. ಗ್ರಾಪಂ ಸಿಬ್ಬಂದಿ ಶಂಕರ ನಡುವಿನಮನಿ ಅವರ ಮೇಲೆ ಕೆಸಿಎಸ್‌ಆರ್ ಮತ್ತು ಸಿಸಿಎ ಕಾನೂನಿನಡಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ.

ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಬಾಬು ಮತ್ತು ಗ್ರಾಪಂ ಸಿಬ್ಬಂದಿ ತಿರಕಪ್ಪ ಬಾಲೆಹೊಸೂರ ಇವರಿಗೆ ಎಚ್ಚರಿಕೆ ನೀಡಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕಯ್ಯ ಮುಳಗುಂದಮಠಗೆ ಹಣ ಮರುಪಾವತಿ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೇ ಕೆರೆ ನಿರ್ಮಾಣ, ಸಾಮೂಹಿಕ ಬದು ನಿರ್ಮಾಣದಲ್ಲಿ ಮಾಡಿದ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಇವರಿಬ್ಬರ ಮೇಲೆ ಲೋಕಾಯುಕ್ತ ತನಿಖೆಯೂ ನಡೆದಿದೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here