ವಿಜಯಸಾಕ್ಷಿ ಸುದ್ದಿ, ಗದಗ:
ಅಕ್ರಮ ಗಣಿಗಾರಿಕೆಯಿಂದ ಕೆರೆಯಂತೆ ನಿರ್ಮಾಣವಾಗಿರುವ ಗರ್ಸಿನ ಕಣಿವೆಯಲ್ಲಿ ನಿಂತಿದ್ದ ನೀರಿನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ಶುಕ್ರವಾರ ನಡೆದಿದೆ.
ಗದಗ ತಾಲ್ಲೂಕಿನ ಚಿಕ್ಕಹಂದಿಗೋಳ
ಗ್ರಾಮದ ಹೊರವಲಯದಲ್ಲಿರುವ ಗರ್ಸಿನ ಕಣಿವೆಯಲ್ಲಿ ಈ ಘಟನೆ ನಡೆದಿದೆ. ಶಾಗೋಟಿ ಗ್ರಾಮದ ರಾಜು ರೋಣದ (17), ಈರಪ್ಪ (17) ಎಂಬ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ.


ಕೆರೆಯಂತಿರುವ ಗರ್ಸಿನ ಕಣಿವೆಯಲ್ಲಿ ಮುಳಗಿರುವ ಬಾಲಕರಿಗಾಗಿ ಅಣ್ಣಿಗೇರಿ, ಹುಬ್ಬಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿ, ಚಿಕ್ಕಹಂದಿಗೋಳ ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿಗಳು ಹಾಗೂ ಪೊಲೀಸರು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇನ್ನು ಬಾಲಕರು ನೀರು ಪಾಲಾಗಿರುವ ಕಣಿವೆಯ ಪಕ್ಕದಲ್ಲಿ ಬಾಲಕರ ಬಟ್ಟೆಗಳು ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.