ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶುಕ್ರವಾರ ಸಂಜೆ 5.30ಕ್ಕೆ ಸಹಸ್ರಾರು ಭಕ್ತರ ಮಧ್ಯೆ ಹಾನಗಲ್ಲ ಗುರು ಕುಮಾರೇಶ್ವರರ ಮಹಾರಥೋತ್ಸವವು ಸಡಗರ, ಸಂಭ್ರಮದಿಂದ ಜರುಗಿತು.
ಕಳೆದ ಆರು ದಿನಗಳಿಂದ ಶ್ರೀಮಠವು ವೈಶಿಷ್ಟ್ಯಪೂರ್ಣ ಪುಣ್ಯ ಸ್ಮರಣೋತ್ಸವ ಹಾಗೂ ನುಡಿಹಬ್ಬ ಆಚರಿಸಿದ ಹಿನ್ನೆಲೆ ಈ ವರ್ಷ ಶ್ರೀಮಠ ಜನಸಾಗರದಿಂದ ತುಂಬಿ ತುಳುಕುತ್ತಿತ್ತು. ಸುತ್ತಮುತ್ತಲ ಪ್ರದೇಶಗಳಾದ ಅಬ್ಬಿಗೆರಿ, ರೋಣ, ಕೊತಬಾಳ, ಸೂಡಿ, ನಿಡಗುಂದಿ, ಜಕ್ಕಲಿ, ಹಾಲಕೆರೆ, ನಿಡಗುಂದಿ, ಯಲಬುರ್ಗಾ, ಕುಕನೂರ, ಕೊಪ್ಪಳ, ಗದಗ, ಮುಂಡರಗಿ ಯನ್ನೊಳಗೊಂಡಂತೆ ನಾಡಿನ ವಿವಿಧ ಮೂಲೆಯಿಂದ ಜನಸಾಗರ ಹರಿದುಬಂದಿತ್ತು.
ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದ ಸದ್ಭಕ್ತರು ತೇರಿನ ಕಳಸದೊಂದಿಗೆ ಭಜನೆ, ಡೊಳ್ಳು, ಕಹಳೆ ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಆಗಮಿಸಿದರೆ, ಮುಧೋಳ ಗ್ರಾಮದ ಸದ್ಭಕ್ತರು ಪಾಲಕಿ ಹಾಗೂ ನಂದಿಕೋಲಿನೊಂದಿಗೆ ಆಗಮಿಸಿದ್ದರು. ಮಾರನಬಸರಿ ಗ್ರಾಮದ ಸದ್ಭಕ್ತರು ಸಕಲ ವಾದ್ಯ ಮೇಳಗಳೊಂದಿಗೆ ತೇರಿನ ಹಗ್ಗದೊಂದಿಗೆ ಆಗಮಿಸಿದರೆ, ನಿಡಗುಂದಿ ಗ್ರಾಮದ ಸದ್ಭಕ್ತರು ಕುಮಾರೇಶ್ವರರ ಭಾವಚಿತ್ರ ಮೆರವಣಿಗೆಯೊಂದಿಗೆ ಆಗಮಿಸುವ ಮೂಲಕ ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಕಂಕೈರ್ಯಗಳು ಜರುಗಿದವು.