ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ : ಇಲ್ಲಿನ ಯಲ್ಲಾಪುರ ಗ್ರಾಮದಿಂದ ಸಿದ್ದಾಪುರ ಹಾಗೂ ಯಲ್ಲಾಪುರದಿಂದ ಸವಣೂರ ತಾಲೂಕಿನ ಇಚ್ಚಂಗಿ ಗ್ರಾಮದವರೆಗಿನ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ಓಡಾಡಲು ತೊಂದರೆಯಾಗಿ ದಿನನಿತ್ಯ ಜೀವ ಭಯದಲ್ಲಿ ಅಡ್ಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಸ್ತೆ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇಲ್ಲಿನ ರೈತರು ಇದೇ ರಸ್ತೆಯಲ್ಲಿಯೇ ತಮ್ಮ ಹೊಲಗಳಿಗೆ ಸಂಚರಿಸಬೇಕಿದೆ. ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಇದೇ ರಸ್ತೆಯಿಂದ ಹೋಗಬೇಕಾಗಿದ್ದು, ಸಂಪೂರ್ಣ ಹದಗೆಟ್ಟಿರುವ ರಸ್ತೆಯಿಂದ ಸಾರ್ವಜನಿಕರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದ್ದರೂ ಸಹ ಯಾವುದೇ ಕ್ರಮಗಳಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸವಣೂರ ತಾಲೂಕಿನ ಯಾವುದೇ ಬಸ್ಸುಗಳು ಈ ರಸ್ತೆಯಲ್ಲಿ ಸಂಚರಿಸಲು ನಿರಾಕರಿಸುತ್ತಿದ್ದಾರೆ. ಸವಣೂರಿನ ರೇಲ್ವೆ ಸ್ಟೇಷನ್ಗೆ ಹೋಗಲು ಸಹ ಅನಾನುಕೂಲವಾಗುತ್ತಿದೆ. ಈ ವಿಷಯವನ್ನು ಹಲವಾರು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜುಂಜನಗೌಡ ನರಸಮ್ಮನವರ, ದೇವೀಂದ್ರಪ್ಪ ಮತ್ತೂರ, ಶಿವನಗೌಡ ಭರಮಗೌಡರ್, ದೇವೀಂದ್ರಪ್ಪ ಪ್ಯಾಟಿ, ಶೇಖಪ್ಪ ಅಂಗಡಿ, ಶಿವಪ್ಪ ಲಮಾಣಿ, ಬಸನಗೌಡ ಹರಕುಣಿ, ಬಸವಣ್ಣೆಪ್ಪ ಪ್ಯಾಟಿ ಮುಂತಾದವರಿದ್ದರು.