ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿಯಲ್ಲಿ ಸಣ್ಣ ವಿಚಾರ ದೊಡ್ಡ ಗಲಾಟೆಗೆ ತಿರುಗಿದ ಘಟನೆ ಬೆಳಕಿಗೆ ಬಂದಿದೆ. ನೀರು ಕುಡಿದ ವಿಷಯಕ್ಕೆ ಎರಡು ಸಮುದಾಯಗಳ ನಡುವೆ ಉದ್ಭವಿಸಿದ ವಿವಾದ ಕಲ್ಲು ತೂರಾಟದ ಮಟ್ಟಕ್ಕೆ ಏರಿದ ಪರಿಣಾಮ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾಹಿತಿ ಪ್ರಕಾರ, ವಾಲ್ಮೀಕಿ ಸಮುದಾಯಕ್ಕೆ ಸೇರಿದ ರೈತನ ಜಮೀನಿನಲ್ಲಿ ಯುವಕನೊಬ್ಬ ನೀರು ಕುಡಿದಿದ್ದಾನೆ. ಆತ ಎಸ್ಸಿ ಸಮುದಾಯಕ್ಕೆ ಸೇರಿದವನಾಗಿದ್ದಾನೆ ಎಂಬ ಕಾರಣಕ್ಕೆ ರೈತ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ವಿಷಯ ಊರಿನಲ್ಲೆಲ್ಲ ಹರಡಿ, ಎರಡು ಸಮುದಾಯಗಳ ನಡುವೆ ತೀವ್ರ ವಾಗ್ವಾದ ಶುರುವಾಗಿದೆ.
ಈ ವಾಗ್ವಾದವು ನಂತರ ಗಲಾಟೆಗೆ ತಿರುಗಿ, ಎರಡೂ ಗುಂಪಿನವರು ಪರಸ್ಪರ ಹೊಡೆದಾಟ ನಡೆಸಿ ಕಲ್ಲು ತೂರಾಟಕ್ಕೆ ಮುಂದಾದರು. ಘಟನೆಯ ಪರಿಣಾಮವಾಗಿ ಎರಡೂ ಸಮುದಾಯಗಳ ಸೇರಿ ಸುಮಾರು 15 ಜನರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
https://www.facebook.com/reel/1249793023467525
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಗ್ರಾಮದಲ್ಲಿ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಸಾಮಾಜಿಕ ಸಮಾನತೆ ಮತ್ತು ಕಾನೂನುಗಳಿದ್ದರೂ, ಅಲ್ಪ ಕಾರಣಕ್ಕೂ ಜಾತಿ ಆಧಾರಿತ ಸಂಘರ್ಷಗಳು ನಡೆಯುತ್ತಿರುವುದು ಚಿಂತಾಜನಕವಾಗಿದೆ.



