ವಿಜಯಸಾಕ್ಷಿ ಸುದ್ದಿ, ಗದಗ: ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದ ವಿಶ್ವಕರ್ಮ ಸಮಾಜವನ್ನು ಮುಖ್ಯವಾಹಿನಿಗೆ ತರುವಲ್ಲಿ ಹಾಗೂ ಸಮಾಜವನ್ನು ಕ್ರಿಯಾತ್ಮಕವಾಗಿ ಸಂಘಟಿಸುವುದರೊಂದಿಗೆ ಪಕ್ಷಾತೀತ ಸಂಘಟನೆಯಾಗಿ ವಿಶ್ವಕರ್ಮ ಮಹಾ ಒಕ್ಕೂಟ ಸಮಾಜಸೇವೆ ಸಲ್ಲಿಸಲಿದೆ ಎಂದು ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ ಪತ್ತಾರ ಹೇಳಿದರು.
ಅವರು ನಗರದ ವಿಜಯನಗರ ಬಡಾವಣೆಯಲ್ಲಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ವಿಶ್ವಕರ್ಮ ಮಹಾ ಒಕ್ಕೂಟದ ಗದಗ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡುತ್ತಿದ್ದರು.
ಸರ್ಕಾರದಿಂದ ಸಿಗಬೇಕಾದ ಅನುದಾನ ತಂದು ವಿಶ್ವಕರ್ಮ ಸಮಾಜದ ಶಕ್ತಿಕೇಂದ್ರಗಳಾದ ಶಿರಸಂಗಿ, ತಿಂಥಣಿ, ವರವಿ, ಲಿಂಗನಬಂಡಿ ಸೇರಿದಂತೆ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಘಟನೆಗಳೊಂದಿಗೆ ಕೈಜೋಡಿಸಿ ಶ್ರಮಿಸಲಾಗುವುದು. ತೊಂದರೆ, ಅನ್ಯಾಯಕ್ಕೆ ಒಳಗಾದ ಸಮಾಜ ಬಾಂಧವರ ಬೆನ್ನೆಲುಬಾಗಿಯೂ ಸಂಘಟನೆ ಕೆಲಸ ಮಾಡಲಿದೆ ಎಂದು ಹೇಳಿದರು.
ವಿಶ್ವಕರ್ಮ ಮಹಾ ಒಕ್ಕೂಟದ ಉತ್ತರ ಕರ್ನಾಟಕ ಪ್ರಾದೇಶಿಕ ಅಧ್ಯಕ್ಷ ನಿರಂಜನ ಬಡಿಗೇರ ಮಾತನಾಡಿ, ಗದಗ ಜಿಲ್ಲಾ ಸಂಘಟನೆ ಸರ್ವರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಮಾದರಿ ಸಂಘಟನೆಯಾಗಿ ಹೊರಹೊಮ್ಮಲಿ ಎಂದು ಶುಭಕೋರಿದರು.
ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ, ವರವಿ ಶ್ರೀಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಅಧ್ಯಕ್ಷ ಮೋಹನ ನರಗುಂದ, ಕಲಬುರ್ಗಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರಶೇಖರ ಪತ್ತಾರ, ಕುರ್ತಕೋಟಿ ವಿಶ್ವಕರ್ಮ ಕುಶಲಕರ್ಮಿ ಕೌಶಲ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಮುತ್ತಣ್ಣ ಬಡಿಗೇರ ಮಾತನಾಡಿದರು.
ವಿಶ್ವಕರ್ಮ ಮಹಾ ಒಕ್ಕೂಟದ ನೂತನ ಜಿಲ್ಲಾ ಅಧ್ಯಕ್ಷ ನಾಗರಾಜ ಕಮ್ಮಾರ, ಮಹಿಳಾ ಘಟಕದ ನೂತನ ಜಿಲ್ಲಾ ಅಧ್ಯಕ್ಷರಾದ ಅನ್ನಪೂರ್ಣ ಬಡಿಗೇರ ಸೇರಿದಂತೆ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷ ವಿಜಯಕುಮಾರ ಪತ್ತಾರ ಪ್ರಮಾಣ ವಚನ ಬೋಧಿಸಿದರು.
ವೇದಿಕೆಯಲ್ಲಿ ಗದಗ ಜಿಲ್ಲಾ ವಿಶ್ವಕರ್ಮ ಮಹಾಸಭಾ ಜಿಲ್ಲಾ ಅಧ್ಯಕ್ಷ ದೇವೇಂದ್ರಪ್ಪ ಬಡಿಗೇರ, ಕೆಪಿಸಿಸಿ ವಿಶ್ವಕರ್ಮ ಕುಶಲಕರ್ಮಿಗಳ ವಿಭಾಗದ ಜಿಲ್ಲಾಧ್ಯಕ್ಷ ಮೌನೇಶ್ವರ ಅಕ್ಕಸಾಲಿಗ, ವಿಶ್ವಕರ್ಮ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೀರಣ್ಣ ಹಲವಾಗಲಿ, ಬೆಟಗೇರಿ ಶ್ರೀಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶ್ರೀಧರ ಕೊಣ್ಣೂರ, ಗದಗ ಜಿಲ್ಲಾ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಮೌನೇಶ ಸಿ. ಬಡಿಗೇರ (ನರೇಗಲ್ಲ), ಗದಗ ಜಿಲ್ಲಾ ವಿಶ್ವಕರ್ಮ ಯುವ ಪರಿಷತ್ ಅಧ್ಯಕ್ಷ ಮಹೇಶ ಕಮ್ಮಾರ, ಎಸ್.ಎನ್. ಬಡಿಗೇರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ವಿಶ್ವಕರ್ಮ ಮಹಾ ಒಕ್ಕೂಟದ ನೂತನ ಜಿಲ್ಲಾ ಸಂಚಾಲಕ ವಿಶ್ವನಾಥ ಯ.ಕಮ್ಮಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಹಿರಿಯ ಸಾಹಿತಿ ಡಿ.ವಿ. ಬಡಿಗೇರ ಮಾತನಾಡಿ, ಇತ್ತೀಚೆಗೆ ಸಂಘಟನೆಗಳ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯಮಟ್ಟದಲ್ಲಿ ಹಲ ಸಂಘಟನೆಗಳು ಜಿಲ್ಲಾ ಮಟ್ಟದ ಸಂಘಟನೆಗಳನ್ನು ಏಣಿಯಾಗಿ ಬಳಕೆ ಮಾಡಿಕೊಂಡು ಕೈಬಿಡುವ ಕೆಲಸವಾಗಿದೆ, ಹಾಗಾಗಬಾರದು. ಸಂಘಟನೆಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.