ವಿಶ್ವಕರ್ಮ ಸಮಾಜ ಪ್ರತಿಭಾ ಸಂಪನ್ನವಾಗಿದೆ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವಿಶ್ವಕರ್ಮ ಸಮಾಜದವರ ಕರಕುಶಲತೆಯು ಈ ಜಗತ್ತಿನಲ್ಲಿಯೇ ಅತ್ಯಂತ ಪ್ರಸಿದ್ಧವಾದುದು. ಅದಕ್ಕಾಗಿ ನಮ್ಮ ನಮನಗಳು ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.

Advertisement

ಪಟ್ಟಣದ ಶ್ರೀ ಕಾಳಿಕಾ ದೇವಿ ದೇವಸ್ಥಾನದ ಲಕ್ಷ ದೀಪೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಬಾಗಿ ಬಂದವರನ್ನು ರಕ್ಷಿಸುವ, ಬೀಗಿ ಬಂದವರನ್ನು ಶಿಕ್ಷಕಿಸುವ ಕಾಳಿಕಾ ಮಾತೆಯನ್ನು ತಮ್ಮ ಕುಲ ಗುರುವಾಗಿ ಪಡೆದಿರುವ ವಿಶ್ವಕರ್ಮ ಸಮಾಜ ಅತ್ಯಂತ ಪ್ರತಿಭಾ ಸಂಪನ್ನ ಸಮಾಜವಾಗಿದೆ. ಅಜ್ಞಾನವನ್ನು ಹೊಡೆದೋಡಿಸಿ ಜ್ಞಾನವನ್ನು ಬೆಳಗಿಸುವ ಈ ಲಕ್ಷ ದೀಪೋತ್ಸವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.

ದೇವಿ ಆರಾಧನೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದವರು ರಾಮಕೃಷ್ಣ ಪರಮಹಂಸರು. ಅವರು ಮಾಡಿದ ಕಾಳಿಕಾ ಮಾತೆಯ ಪೂಜೆಯು ವಿಶ್ವಕರ್ಮ ಸಮಾಜಕ್ಕೊಂದು ವರದಾನ. ಯುವ ಪೀಳಿಗೆ ವಿಶ್ವಕರ್ಮ ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗಬೇಕು. ಹಿಂದೂ ಧರ್ಮದಲ್ಲಿ ದೀಪಾರಾಧನೆ ಸಂಸ್ಕೃತಿಗೆ ವಿಶೇಷ ಮಹತ್ವವಿದೆ. ಈಗ ವಿಶ್ವಕರ್ಮ ಸಮಾಜದವರು ನೆರವೇರಿಸುತ್ತಿರುವ ದೀಪೋತ್ಸವದಿಂದ ಜಗತ್ತಿನ ಅಂಧಕಾರ ನಾಶವಾಗಲೆಂದು ಶ್ರೀಗಳು ಹಾರೈಸಿದರು.

ಧುರೀಣ ಮಿಥುನ್ ಪಾಟೀಲ ಮಾತನಾಡಿ, ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಇಂತಹ ಕಾರ್ಯಗಳು ಮೇಲಿಂದ ಮೇಲೆ ಜರುಗುತ್ತಿದ್ದರೆ ಗ್ರಾಮಗಳು ಶಾಂತವಾಗಿರುತ್ತವೆ. ನರೇಗಲ್ಲದ ವಿಶ್ವಕರ್ಮ ಸಮಾಜ ಎಂದಿಗೂ ರಚನಾತ್ಮಕ ಕಾರ್ಯಗಳಿಗೆ ಮುಂದು ಎಂದರು.

ಜಗನ್ನಾಥ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶಿವಶಕ್ತಿಯರ ಆರಾಧನೆ ಅನಾದಿ ಕಾಲದಿಂದಲೂ ಭಾರತದಲ್ಲಿ ನಡೆದು ಬಂದಿದೆ. ಈ ಆರಾಧನೆಯಿಂದ ಮನಸ್ಸಿಗೆ ಶಾಂತಿ, ಶಕ್ತಿ ದೊರಕುತ್ತದೆ. ನರೇಗಲ್ಲದ ವಿಶ್ವಕರ್ಮ ಸಮಾಜದವರು ಲಕ್ಷ ದೀಪೋತ್ಸವವನ್ನು ನೆರವೇರಿಸುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ ಎಂದರು.

ಹೊಳೆಆಲೂರಿನ ಶ್ರಿ ಯಚ್ಚರೇಶ್ವರ ಮಹಾಸ್ವಾಮಿಗಳು, ಇಳಕಲ್ಲಿನ ಶ್ರೀ ವಿಶ್ವನಾಥ ಮಹಾಸ್ವಾಮಿಗಳು, ಶ್ರೀ ದಿವಾಕರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭವನ್ನುದ್ದೇಶಿಸಿ ಭೀಮಸೇನ ಬಡಿಗೇರ, ಶಶಿಕಲಾ ಪಾಟೀಲ, ಅರುಣ ಕುಲಕರ್ಣಿ, ಶಿವನಗೌಡ ಪಾಟೀಲ, ದಾವೂದಲಿ ಕುದರಿ, ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿದರು. ವೇದಿಕೆಯ ಮೇಲೆ ಕಲ್ಮೇಶ ತೊಂಡಿಹಾಳ, ರಾಮಣ್ಣ ನವಲಿ, ಶೇಕಪ್ಪ ಜುಟ್ಲ, ನಾರಾಯಣ ವಡ್ಡಟ್ಟಿ, ಅಲ್ಲಾಭಕ್ಷಿ ನದಾಫ್, ಸುನೀಲ ಬಸವರಡ್ಡೇರ ಇನ್ನೂ ಮುಂತಾದವರಿದ್ದರು. ಲಕ್ಷದೀಪೋತ್ಸವ ಸಮಿತಿ ಅಧ್ಯಕ್ಷ ಮೌನೇಶ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಸಿಂಧೂ ಪಾಟೀಲ ಮತ್ತು ದೃಷ್ಟಿ ಪತ್ತಾರರ ನೃತ್ಯ ಗಮನ ಸೆಳೆಯಿತು. ವಿಠ್ಠಲ ಪತ್ತಾರ ಸ್ವಾಗತಿಸಿದರು. ಸುರೇಶ ಪತ್ತಾರ ನಿರೂಪಿಸಿದರು.

ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ನಮಸ್ಕಾರ ಮಾಡುವ ಸಂಸ್ಕಾರವನ್ನು ಕಲಿಸಿಕೊಟ್ಟಿದ್ದೇ ಈ ಸಮಾಜ. ಇವರಿಂದ ನಿರ್ಮಾಣಗೊಂಡ ಅದೆಷ್ಟೋ ಕಲಾಕೃತಿಗಳು ಇಂದಿಗೂ ಈ ಜಗತ್ತಿನಲ್ಲಿ ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡಿವೆ. ಇಂತಹ ಸೇವೆ ಸಲ್ಲಿಸಿರುವ ಸಮಾಜಕ್ಕೆ ನಾವೆಂದಿಗೂ ಕೃತಜ್ಞರಾಗಿರಬೇಕೆಂದರು.


Spread the love

LEAVE A REPLY

Please enter your comment!
Please enter your name here