ವಿಜಯಸಾಕ್ಷಿ ಸುದ್ದಿ, ಗದಗ : ಕೈಗಾರಿಕೆ ಹಾಗೂ ಕೃಷಿ ಸ್ಥಳಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ಪ್ರಾಯೋಗಿಕ ಜ್ಞಾನವನವನ್ನು ಪಡೆಯುವುದು ಶಿಕ್ಷಣ ಒಂದು ಭಾಗವಾಗಿದ್ದು, ಇದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ನೀಡುತ್ತದೆ. ಪ್ರತಿಯೊಬ್ಬರು ತಮ್ಮ ಸ್ವಂತ ಅನುಭವಗಳಿಂದ ಮತ್ತು ಇತರರ ಅನುಭವದಿಂದ ಕಲಿಯಲು ಸಾಕಷ್ಟು ವ್ಯತ್ಯಾಸವಿದೆ. ಸ್ವಂತ ಅನುಭವಗಳು ಹೆಚ್ಚು ಜ್ಞಾನವನ್ನು ನೀಡುತ್ತವೆ ಎಂದು ಪ್ರೊ. ಸಂತೋಷ ಮೂರಶಿಳ್ಳಿಯವರು ತಿಳಿಸಿದರು.
ಕೆಎಲ್ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಗದಗ ಗೃಹ ವಿಜ್ಞಾನ ವಿಭಾಗಗಳ ವಿದ್ಯಾರ್ಥಿನಿಯರು ಶಿರಹಟ್ಟಿ ಹಾಗೂ ಗದಗ ಸುತ್ತಮುತ್ತಲ ರೇಷ್ಮೆ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪ್ರಸ್ತುತ ರೇಷ್ಮೆ ಕೃಷಿಯ ಪದ್ಧತಿಯನ್ನು ಕಲಿತು ತಮ್ಮ ವಿದ್ಯಾಭ್ಯಾಸದ ನಂತರ ಯಾವ ರೀತಿ ಈ ಉದ್ಯೋಗವನ್ನು ಮಾಡಬಹುದು ಎಂದು ತಿಳಿಸಿದರು. ಇದರ ಜೊತೆಗೆ ಕಾಲಕಾಲಕ್ಕೆ ಹೊಸದಾಗಿ ವಿಕಸನಗೊಂಡ ತಂತ್ರಜ್ಞಾನಗಳನ್ನು ಬಳಸಿಕೊಂಡು ರೇಷ್ಮೆ ಕೃಷಿಯಿಂದ ತಮ್ಮ ಜೀವನೋಪಾಯವನ್ನು ಹೆಚ್ಚಿಸುವ ಲಾಭದಾಯಕ ಮಾರ್ಗದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ನೀಡಿದರು.
ಪ್ರಸ್ತುತ ಕೈಗಾರಿಕೆ ಹಾಗೂ ಕೃಷಿ ಸ್ಥಳಗಳಿಗೆ ಭೇಟಿ ನೀಡಲು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಕೆ. ಮಠ ಮಾರ್ಗದರ್ಶನ ನೀಡಿದರು. ಮಹಾವಿದ್ಯಾಲಯಗಳ ಗೃಹ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ವೀಣಾ ತಿರ್ಲಾಪೂರ ಹಾಗು ಗೃಹ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.