ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಶಹರದ ಗಂಗಾಪೂರ ಪೇಟೆಯಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ-178ರಲ್ಲಿ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ಅವರು ಭೇಟಿ ನೀಡಿ ಪರಿಶೀಲಿಸಿದರು.
ಸಕ್ಕರೆಯಲ್ಲಿ ಹುಳು, ಶೇಂಗಾ ಚಿಕ್ಕಿಗಳು ಬುಳುಸು ಬಂದಿರುವುದು, ಕೊಳೆತು ಹೋದ ತರಕಾರಿಗಳು, ಕೆಟ್ಟು ಹೋದ ಮೊಟ್ಟೆ ನೀಡಿರುವುದರಿಂದ ಹಾಗೂ ಇಲಿಗಳು ತಿಂದ ತರಕಾರಿ ಇನ್ನಿತರ ದವಸ ಧಾನ್ಯ ಬಳಸಿದ್ದರಿಂದ ಈ ರೀತಿ ಕಳಪೆ ಆಹಾರ ಸೇವಿಸಿ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಅಲ್ಲಿ ಸೇರಿದ್ದ ಮಕ್ಕಳ ಪಾಲಕರಾದ ನವೀನ ತಾತೂಸ್ಕರ, ಸರ್ದಾರಅಹ್ಮದ ಧಾರವಾಢ, ರೇಣುಕಾ ಎನ್.ಕಬಾಡಿ ಅಳಲನ್ನು ತೋಡಿಕೊಂಡರು.
ಭೇಟಿಯ ಸಮಯದಲ್ಲಿ ಅವಧಿ ಮೀರಿದ ತೊಗರಿಬೇಳೆಗಳ ಪಾಕಿಟ್ಗಳು ಕಂಡುಬಂದಿದ್ದು, ಅವುಗಳನ್ನು ನಾಶ ಪಡಿಸಲು, ಹಾಜರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ರಾಧಾ ಮನ್ನೂರರಿಗೆ ನ್ಯಾಯಾಧೀಶರು ನಿರ್ದೇಶಿಸಿದರು. ಅಂಗನವಾಡಿ ಕೇಂದ್ರದ ಸ್ವಚ್ಛತೆ ಬಗ್ಗೆ ಗಮನ ಹರಿಸಲು, ಪೌಷ್ಟಿಕ, ಸ್ವಚ್ಛತೆಯಿಂದ ಕೂಡಿದ ಆಹಾರವನ್ನು ಮಕ್ಕಳಿಗೆ ನೀಡಲು ಸೂಚಿಸಿದರು. ಅಂಗನವಾಡಿ ಶಿಕ್ಷಕಿ ಅಕ್ಕಮ್ಮ ಎಸ್.ಅಮರಗಟ್ಟಿ ಇವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಅಮಾನತುಗೊಳಿಸಿ ಅವರ ಜಾಗಕ್ಕೆ ಪ್ರಭಾರಿಯಾಗಿ ಮಂಜುಳಾ ಬೆಟಗೇರಿ ಅವರನ್ನು ನಿಯೋಜಿಸಿರುತ್ತಾರೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿಗಳು ತಿಳಿಸಿದರು.