ಸಹಕಾರ ಬ್ಯಾಂಕುಗಳ ಪಾತ್ರ ಪ್ರಮುಖವಾಗಿದೆ : ಕೆ.ಎನ್. ರಾಜಣ್ಣ

0
Visit to Gadag branch of the K.C.C. bank
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗ್ರಾಮೀಣ ಪ್ರದೇಶದ ರೈತರಿಗೆ ಮತ್ತು ಬಡವರ್ಗದ ಜನತೆಗೆ ಆರ್ಥಿಕ ಸಾಲ ಸೌಲಭ್ಯ ಕಲ್ಪಿಸುವಲ್ಲಿ ಸಹಕಾರ ಬ್ಯಾಂಕುಗಳ ಪಾತ್ರ ಪ್ರಮುಖವಾಗಿದೆ. ಸಹಕಾರ ಬ್ಯಾಂಕುಗಳ ಆರ್ಥಿಕ ಬಲವರ್ಧನೆಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಅನುದಾನ ರಾಷ್ಟ್ರೀಕೃತ ಬ್ಯಾಂಕುಗಳ ಬದಲಿಗೆ ಜಿಲ್ಲಾ ಕೇಂದ್ರ ಬ್ಯಾಂಕುಗಳಲ್ಲಿ ಇಡುವ ಅಗತ್ಯವಿದ್ದು, ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಶುಕ್ರವಾರ ಕೆ.ಸಿ.ಸಿ. ಬ್ಯಾಂಕಿನ ಗದಗ ಶಾಖೆಗೆ ಭೇಟಿನೀಡಿ ಪರಿಶೀಲನೆ ನಡೆಸಿದ ಸಚಿವರು, ಬ್ಯಾಂಕು ಆರ್ಥಿಕವಾಗಿ ಪ್ರಗತಿಯತ್ತ ಸಾಗಿದ್ದು, ಆರ್ಥಿಕವಾಗಿ ಇನ್ನಷ್ಟು ಸಬಲವಾಗಲು ಹೆಚ್ಚು ಹೆಚ್ಚಾಗಿ ಕೃಷಿಯೇತರ ಸಾಲ ಸೌಲಭ್ಯಗಳನ್ನು ವಿತರಿಸಬೇಕು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕೂಡಾ ಬಲಪಡಿಸಬೇಕು.
ಸಹಕಾರ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವೃತ್ತಿಪರ ತರಬೇತಿ ಕೇಂದ್ರಗಳಲ್ಲಿನ ಅನುಭವಿಕ ತಜ್ಞರಿಂದ ಕಾಲ ಕಾಲಕ್ಕೆ ತರಬೇತಿ ಕೊಡಿಸಬೇಕು. ಸಹಕಾರ ಬ್ಯಾಂಕುಗಳ ಕಾರ್ಯನಿರ್ವಹಣೆಯ ಮೇಲೆ ಆಡಳಿತ ವರ್ಗ ಸೂಕ್ತ ನಿಯಂತ್ರಣ ಹೊಂದಿರಬೇಕು. ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗುವ ಸೇವೆ ಒದಗಿಸಲು ಮತ್ತು ಸಹಕಾರ ಸಂಸ್ಥೆಗೆ ಯಾವುದೇ ಹಾನಿಯಾಗದಂತೆ ಆಡಳಿತವರ್ಗ ಸೂಕ್ತ ನಿಗಾ ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಚಿವರೊಂದಿಗೆ ಕೆ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಶಿವಕುಮಾರಗೌಡ ಎಸ್.ಪಾಟೀಲ, ನಿರ್ದೇಶಕರಾದ ಮಲ್ಲಪ್ಪ ಎಫ್.ಕಲಗುಡಿ, ಸಿ.ಎಂ. ಪಾಟೀಲ, ಜಿ.ವ್ಹಿ. ಪಾಟೀಲ, ಸಿ.ಬಿ. ದೊಡ್ಡಗೌಡ್ರ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಿ.ಎಸ್. ರಮಣರೆಡ್ಡಿ, ಯುವ ಮುಖಂಡ ಕೃಷ್ಣಗೌಡ ಪಾಟೀಲ, ಕೆ.ಸಿ.ಸಿ. ಬ್ಯಾಂಕಿನ ಅಧಿಕಾರಿ ಎಸ್.ಜಿ. ಆಲದಕಟ್ಟಿ, ವಸೂಲಾಧಿಕಾರಿ ಬಿ.ಬಿ. ನಾಯಕ, ಶಾಖಾ ವ್ಯವಸ್ಥಾಪಕರಾದ ಆರ್.ಎಸ್. ತಟ್ಟಿ, ಹಿರಿಯ ಅಧಿಕಾರಿಗಳು, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಕೆ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಶಿವಕುಮಾರಗೌಡ ಎಸ್.ಪಾಟೀಲ ಮಾತನಾಡಿ, ಬ್ಯಾಂಕಿನ ಪ್ರಗತಿಗೆ ರೂಪಿಸಿದ ಅಭಿವೃದ್ಧಿಪರ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ರೈತ ಸದಸ್ಯರ ಪರವಾಗಿ ಕೃಷಿ ಸಂಬಂಧಿತ ಸಾಲ ಸೌಲಭ್ಯಗಳಿಗೆ ಹೆಚ್ಚಿನ ಆರ್ಥಿಕ ನೆರವು ಕಲ್ಪಿಸುವ ಬಗ್ಗೆ ಸಚಿವರಿಗೆ ಮನವಿ ಅರ್ಪಿಸಿದರು.

Spread the love
Advertisement

LEAVE A REPLY

Please enter your comment!
Please enter your name here