ವಿಜಯಸಾಕ್ಷಿ ಸುದ್ದಿ, ಗದಗ : ರಕ್ತದಾನ ಮಾಡುವುದರಿಂದ ಹಲವಾರು ಜೀವಗಳನ್ನು ಉಳಿಸಬಹುದು. ರಕ್ತದ ಕಣದಲ್ಲಿ ಐದು ವಿಧಗಳಾಗಿ ವಿಂಗಡಿಸಿ ಅಗತ್ಯವಿರುವ ಐದು ಜನರಿಗೆ ನೀಡಲಾಗುವುದು. ಹೀಗಾಗಿ, ಒಬ್ಬರ ರಕ್ತ ಐದು ಜೀವಗಳಿಗೆ ವರದಾನ. ಕಾರಣ ಅರ್ಹರೆಲ್ಲರೂ ತಪ್ಪದೇ ರಕ್ತದಾನ ಮಾಡಬೇಕು. ರಕ್ತದಾನ ಜೀವದಾನ ಇದ್ದಂತೆ ಎಂದು ಶಿಗ್ಗಾಂವಿಯ ನಿವೃತ್ತ ಸ್ತ್ರೀರೋಗ ತಜ್ಞರಾದ ಡಾ. ಪದ್ಮಾವತಿ ಪತ್ತಾರ ಹೇಳಿದರು.
ಅವರು ನಗರದ ವಿಜಯನಗರ ಬಡಾವಣೆಯಲ್ಲಿರುವ ವಿಶ್ವಕರ್ಮ ಭವನದಲ್ಲಿ `ವಿಶ್ವಕರ್ಮ ಮಹೋತ್ಸವ’ ಅಂಗವಾಗಿ ಗದಗ ಜಿಲ್ಲಾ ವಿಶ್ವಕರ್ಮ ಸಮಾಜದ ವತಿಯಿಂದ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಹಾಗೂ ರಕ್ತ ತಪಾಸಣೆ ಶಿಬಿರ ಮತ್ತು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ ಮಾತನಾಡಿ, ಮಹಾತ್ಮರ, ಶರಣರ, ಸಾಧು ಸಂತರ ಜಯಂತಿ, ಮಹೋತ್ಸವಗಳು ಭಾಷಣ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾಗದೇ, ಜನಪರ, ಸಮುದಾಯ ಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ಅ ಕಾರ್ಯಗಳಿಗೆ ನೈಜ ಅರ್ಥಬರಲು ಸಾಧ್ಯ. ಈ ನಿಟ್ಟಿನಲ್ಲಿ ರಕ್ತದಾನ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ. ವಿಶ್ವಕರ್ಮ ಸಮುದಾಯದ ಎಲ್ಲ ಬಂಧುಗಳು ಇಂತಹ ರಚನಾತ್ಮಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷರಾದ ಎ.ಎನ್. ಬಡಿಗೇರ, ನಿರ್ದೇಶಕರಾದ ಡಾ. ಗಿರೀಶ ಬಡಿಗೇರ, ಯುವ ಪರಿಷತ್ ಅಧ್ಯಕ್ಷ ಮಹೇಶ ಕಮ್ಮಾರ, ರಿಂದಮ್ಮ ವಡ್ಡಟ್ಟಿ ಉಪಸ್ಥಿತರಿದ್ದರು. ಸಾಹಿತ್ಯ ಪತ್ತಾರ ಪ್ರಾರ್ಥಿಸಿದರು. ಸುಮಂಗಲಾ ಪತ್ತಾರ ಸ್ವಾಗತಿಸದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕಮ್ಮಾರ ನಿರೂಪಿಸಿದರೆ, ಡಾ. ಗಿರೀಶ ಬಡಿಗೇರ ವಂದಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಉಮೇಶ ಪುರದ ಮಾತನಾಡಿ, ಆಧುನಿಕ ತಂತ್ರಜ್ಞಾನ ಬಹಳ ಉತ್ತುಂಗದಲ್ಲಿದೆ. ಮನುಷ್ಯ ಎಲ್ಲವನ್ನು ಸಂಶೋಧನೆ ಮಾಡಿದ್ದರೂ, ರಕ್ತದ ಉತ್ಪಾದನೆ ಅಸಾಧ್ಯ. ಹೀಗಾಗಿ, ಎಲ್ಲರೂ ರಕ್ತದಾನ ಮಾಡಬೇಕು. ಆ ಮೂಲಕ ಜೀವ ಉಳಿಸಿದ ಪುಣ್ಯ ಪ್ರಾಪ್ತವಾಗುವುದು ಎಂದರು.