ವಿಜಯಸಾಕ್ಷಿ ಸುದ್ದಿ, ಗದಗ: ಪರಸ್ಪರ ಸಹಕಾರ ಮತ್ತು ಸಹಬಾಳ್ವೆಯಿಂದ ಅಭಿವೃದ್ಧಿ ಸಾಧ್ಯ ಎಂಬುದರಲ್ಲಿ ನಂಬಿಕೆಯನ್ನು ಇಟ್ಟಿದ್ದ ಕೆ.ಎಚ್. ಪಾಟೀಲರು ಸಹಕಾರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರು. ಸಹಕಾರಿ ರಂಗದ ಭೀಷ್ಮರೆನಿಸಿಕೊಂಡು ಸಮಾಜೋಪಯೋಗಿ ಕಾರ್ಯಗಳನ್ನು ಮಾಡಿದರು. ಗ್ರಾಮೀಣ ಭಾಗದ ಜನರ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ವಿಶೇಷ ಕೊಡುಗೆಯನ್ನು ನೀಡಿದರು. ಜನೋಪಯೋಗಿ ಕಾರ್ಯಗಳ ಮೂಲಕ ಕೆ.ಎಚ್. ಪಾಟೀಲ ಅಜರಾಮರರಾಗಿದ್ದಾರೆ ಎಂದು ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಕೆ.ಎಚ್. ಪಾಟೀಲರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕರ್ನಾಟಕ ಸರಕಾರದ ಮಂತ್ರಿಗಳಾಗಿ ಜನರ ಜೀವನಮಟ್ಟವನ್ನು ಸುಧಾರಿಸುವ ಹಿನ್ನೆಲೆಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಜೊತೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗದುಗಿನಲ್ಲಿ ಜರುಗಿಸುವ ಮೂಲಕ ಸಾಹಿತ್ಯಾಭಿರುಚಿಯನ್ನು ಮೆರೆದರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಚ್.ಸಿ.ಇ.ಎಸ್. ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಿ.ಬಿ. ಪಾಟೀಲ ಮಾತನಾಡಿ, ಕೆ.ಎಚ್. ಪಾಟೀಲರು ಬಹುಮುಖ ಆಯಾಮಗಳಲ್ಲಿ ಕಾರ್ಯ ಮಾಡಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ ಎಂದು ತಿಳಿಸಿ, ಇದೇ ಸಂದರ್ಭದಲ್ಲಿ ಕೆ.ಎಚ್. ಪಾಟೀಲರ ಹೆಸರಿನ ದತ್ತಿನಿಧಿಗೆ ಹೆಚ್ಚುವರಿಯಾಗಿ 90 ಸಾವಿರ ರೂಪಾಯಿಗಳ ಚೆಕ್ನ್ನು ಪರಿಷತ್ತಿನ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ದಲಿತ ಸಾಹಿತ್ಯ ಪರಿಷತ್ತಿನ ಮೂಲಕ ಮಾಡಿದ ಕಾರ್ಯವನ್ನು ಮನಗಂಡು ಡಾ. ಅರ್ಜುನ ಗೊಳಸಂಗಿ ಅವರನ್ನು ಹಾಗೂ ತೋಟಗಾರಿಕಾ ಕ್ಷೇತ್ರದ ಸಾಧನೆಗಾಗಿ ಸುರೇಶ ಕುಂಬಾರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರೊ ಕೆ.ಎಚ್. ಬೇಲೂರ, ಸಿ.ಕೆ.ಎಚ್. ಶಾಸ್ತಿç, ಎಸ್.ಡಿ. ಗಾಂಜಿ, ಅಜಿತ ಘೋರ್ಪಡೆ, ಶಶಿಕಾಂತ ಕೊರ್ಲಹಳ್ಳಿ, ಭಾರತಿ ಕೋಟಿ, ಡಾ. ರಶ್ಮಿ ಅಂಗಡಿ, ಶಿಲ್ಪಾ ಮ್ಯಾಗೇರಿ, ಭಾಗ್ಯಶ್ರೀ ಹುರಕಡ್ಲಿ, ಚಂದ್ರಕಲಾ ಇಟಗಿಮಠ, ಪಾರ್ವತಿ ಬೇವಿನಮರದ, ಎಚ್.ಟಿ. ಸಂಜೀವಸ್ವಾಮಿ, ಅನಂತ ಮೋಹನ ಭಟ್, ಬಸವರಾಜ ವಾರಿ, ಶೇಖಣ್ಣ ಕಳಸಾಪೂರ, ಬಿ.ಬಿ. ಹೊಳಗುಂದಿ, ಬಿ.ವಿ. ಕೊಟ್ಟೂರ, ಜಿ.ಎನ್. ಪಾಟೀಲ, ಎಸ್.ಬಿ. ಮಾಳಗಿಮನಿ, ಲಿಂಗರಾಜ ಪಾಟೀಲ, ಶರಣಪ್ಪ ಹೊಸಂಗಡಿ, ಬಿ.ಎಸ್. ಹಿಂಡಿ, ಜಿ.ವಿ. ಮಳಲಿ, ಜಗನ್ನಾಥ ಟೀಕಾಂದಾರ, ಶಿವಾನಂದ ಭಜಂತ್ರಿ, ಎಂ.ಎಫ್. ಡೋಣಿ, ಪ್ರ.ತೋ. ನಾರಾಯಣಪುರ, ಆರ್.ಡಿ. ಕಪ್ಪಲಿ, ಸುರೇಶ ಕುಂಬಾರ, ಅಶೋಕ ಸತ್ಯರಡ್ಡಿ, ಎಸ್.ಬಿ. ಕಣಗಿನಹಾಳ, ಅ.ದ. ಕಟ್ಟಿಮನಿ, ಸಿ.ಎಂ. ಮಾರನಬಸರಿ, ಎಂ.ಎಂ. ಮಕಾನದಾರ, ಶಕುಂತಲಾ ಸಿಂಧೂರ, ಗುರುದೇವಿ, ಅಕ್ಕಮಹಾದೇವಿ, ರತ್ನಾ ಪುರಂತರ, ಜೆ.ಎ. ಪಾಟೀಲ, ಷಡಕ್ಷರಿ ಮೆಣಸಿನಕಾಯಿ, ಸತೀಶಕುಮಾರ ಚನ್ನಪ್ಪಗೌಡ್ರ, ರವೀಂದ್ರ ಜೋಶಿ, ಗುರುಮೂರ್ತಿ ದೇಶಪಾಂಡೆ, ಕೆ.ಎಸ್. ಜಯದೇವಭಟ್, ಅಮರೇಶ ರಾಂಪೂರ, ದಿನೇಶ ಚನ್ನಪ್ಪಗೌಡ್ರ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ.ಸಾ.ಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಜನಸೇವೆ, ಸಮಾಜಸೇವೆ ಮಾಡುವ ಅವಕಾಶ ವ್ಯಕ್ತಿಗೆ ದೊರೆತಾಗ ತಾರತಮ್ಯವಿಲ್ಲದೇ ಜನಪರ ಕೆಲಸವನ್ನು ಮಾಡಿದಾಗ ಮಾತ್ರ ವ್ಯಕ್ತಿ ಶಾಶ್ವತವಾಗಿ ನೆಲೆ ನಿಲ್ಲಲು ಸಾಧ್ಯವಾಗುತ್ತದೆ. ಈ ಕಾರ್ಯವನ್ನು ಕೆ.ಎಚ್. ಪಾಟೀಲರು ಮಾಡುವ ಮೂಲಕ ಸಹಕಾರ, ಶಿಕ್ಷಣ, ಕೃಷಿ, ಸಂಘಟನಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಸಾಮಾಜಿಕ ಕಳಕಳಿಯನ್ನು ಇಂದಿನ ಯುವಪೀಳಿಗೆ ಹೊಂದಬೇಕಾದುದು ಅಗತ್ಯ ಎಂದು ತಿಳಿಸಿದರು.