ವಿಜಯಸಾಕ್ಷಿ ಸುದ್ದಿ, ಗದಗ : ಕೇಂದ್ರದಲ್ಲಿರುವ ಮೋದಿ ಸರ್ಕಾರ ಕಳೆದ 10 ವರ್ಷಗಳಿಂದ ರೈತರ, ಕಾರ್ಮಿಕರ, ದುಡಿಯುವ ವರ್ಗಗಳ ಹಿತ್ತಾಸಕ್ತಿಯನ್ನು ಕೈಬಿಟ್ಟು, ಶ್ರೀಮಂತರಿಗೆ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಲಾಭವಾಗುವ ನಿಟ್ಟಿನಲ್ಲಿ ತಮ್ಮ ಆಡಳಿತವನ್ನು ನಡೆಸುತ್ತ ಬಂದಿದೆ. ಮತ ದ್ವೇಷ, ಹಿಂಸೆ ಮತ್ತು ದೌರ್ಜನ್ಯಗಳನ್ನು ಹೆಚ್ಚು ಮಾಡಿ ಜನರನ್ನು ವಿಭಜನೆ ಮಾಡುತ್ತಿದೆ. ಇಂತಹ ನೀತಿಗಳನ್ನು ಸೋಲಿಸದಿದ್ದರೆ ಜನರ ಬದುಕಿಗೆ ನೆಮ್ಮದಿ ಹಾಗೂ ರಕ್ಷಣೆಯಿಲ್ಲ. ಹಾಗಾಗಿ ಸಂವಿಧಾನಕ್ಕೆ ಗೌರವ ನೀಡುವ ಪಕ್ಷದ ಅಭ್ಯರ್ಥಿಗೆ ಮತವನ್ನು ಹಾಕಬೇಕೆಂದು ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಕರೆ ನೀಡಿದರು.
ಅವರು ನಗರದ ರಾಚೋಟೇಶ್ವರ ಸ್ಲಂ ಪ್ರದೇಶದಲ್ಲಿ `ಸಂವಿಧಾನ ಉಳಿಸಲು ಮತ್ತು ದೇಶದ ರಕ್ಷಣೆಗಾಗಿ ಸ್ಲಂ ಜನರ ಮತ’ ಜನ ಜಾಗೃತಿ ಆಂದೋಲನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ನಮ್ಮ ದೇಶವು ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ರಾಷ್ಟ್ರವಾಗಿದೆ. ನಮ್ಮ ಸಂವಿಧಾನವು ಎಲ್ಲಾ ನಾಗರಿಕರಿಗೆ ತಾರತಮ್ಯರಹಿತವಾದ ಸಮಾನ ನ್ಯಾಯವನ್ನು ಖಾತರಿಪಡಿಸುತ್ತದೆ. ಆದರೆ ನಮ್ಮ ದೇಶದ ಶೇ.70ರಷ್ಟು ಜನರು ಇಂದು ಅಭಿವೃಧ್ದಿಯಿಂದ ವಂಚಿತರಾಗಿದ್ದಾರೆ ಎಂದರು.
ಗದಗ-ಬೆಟಗೇರಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹ್ಮದ ಯುಸುಫ್ ನಮಾಜಿ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಮಾತನಾಡಿದರು. ಗದಗ ಜಿಲ್ಲಾ ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ ಅಧ್ಯಕ್ಷತೆ ವಹಿಸಿದ್ದರು. ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಹಿಳಾ ಸಮಿತಿ ಸಂಚಾಲಕಿ ಮೆಹರುನಿಸಾ ಢಾಲಾಯತ, ಇಬ್ರಾಹಿಂ ಮುಲ್ಲಾ, ಶಿವಾನಂದ ಶಿಗ್ಲಿ, ಸಾಕ್ರುಬಾಯಿ ಗೋಸಾವಿ, ಮೆಹಬೂಬಸಾಬ ಬಳ್ಳಾರಿ, ಮಲೇಶಪ್ಪ ಕಲಾಲ, ಬಾಷಾಸಾಬ ಡಂಬಳ, ದಾದು ಗೋಸಾವಿ, ಖಾಜಾಸಾಬ ಇಸ್ಮಾಯಿಲನವರ, ಶಿವಪ್ಪ ಲಕ್ಕುಂಡಿ, ಸಲೀಮ ಬೈರಕದಾರ, ಚಂದ್ರಿಕಾ ರೋಣದ, ಅಫ್ರೋಜಾ ಹುಬ್ಬಳ್ಳಿ, ಶೊಸೀಲಮ್ಮ ಗೊಂದರ, ಫೈರುಜಾ ಹುಬ್ಬಳ್ಳಿ, ಮೆಹರುನಿಸಾ ಡಂಬಳ, ತಿಪ್ಪಮ್ಮ ಕೊರವರ, ಕೌಸರ ಬೈರಕದಾರ, ವಿಶಾಲಕ್ಷಿ ಹಿರೇಗೌಡ್ರ, ನಗೀನಾ ಯಲಿಗಾರ, ಪೀರಮ್ಮ ನದಾಫ, ಜೈತುನಬಿ ಶಿರಹಟ್ಟಿ, ಲಕ್ಷ್ಮಿ ಮಣವಡ್ಡರ, ಶೋಭಾ ಹಿರೇಮಠ, ಮಕ್ತುಮಸಾಬ ಮುಲ್ಲಾನವರ, ದುರ್ಗಪ್ಪ ಮಣ್ಣವಡ್ಡರ ಮುಂತಾದವರಿದ್ದರು.
ಪ್ರಗತಿಪರ ಚಿಂತಕ ಬಸವರಾಜ ಪೂಜಾರ ಮಾತನಾಡಿ, ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶವಿರುವುದು ಸಂವಿಧಾನದ ಕೊಡುಗೆಯಾಗಿದೆ. ನಮ್ಮ ದೇಶದ ಸಂವಿಧಾನದ ಮೂಲಕ ಬಡ ಮತ್ತು ಮಧ್ಯಮ ವರ್ಗದ ವ್ಯಕ್ತಿಯೊಬ್ಬ ಪ್ರಧಾನಮಂತ್ರಿಯಾಗಬಹುದು ಮತ್ತು ರಾಷ್ಟ್ರಪತಿಯಾಗಲೂ ಸಾಧ್ಯವಿದೆ. ಮೂಲಭೂತವಾದ, ಕೋಮುವಾದ ರಾರಾಜಿಸುತ್ತದೆ. ಆಗ ನಾವು ಪ್ರಜಾಪ್ರಭುತ್ವ, ಸಮಾಜಿಕ ನ್ಯಾಯವನ್ನು ಕಳೆದುಕೊಳ್ಳುತ್ತೇವೆ. ಇದನ್ನು ತಪ್ಪಿಸಲು ನಮ್ಮ ದೇಶದ ಸಂವಿಧಾನ ಉಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.