ವಿಜಯಸಾಕ್ಷಿ ಸುದ್ದಿ, ಗದಗ : ಪಟ್ಟಣದ ಶಾದಿಮಹಲ್ನಲ್ಲಿ ಶುಕ್ರವಾರ ಏರ್ಪಡಿಸಿದ್ದ ನದಾಫ-ಹರ್ಲಾಪೂರ ಕುಟುಂಬದ ಮದುವೆ ಸಮಾರಂಭದಲ್ಲಿ ತಾಲೂಕು ಪಂಚಾಯಿತಿಯ ಸರ್ವ ಸಿಬ್ಬಂದಿಗಳು ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ನೇತೃತ್ವದಲ್ಲಿ ಭಾಗವಹಿಸಿ ಮದುವೆ ಮಂಟಪದಲ್ಲಿಯೇ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
ಕಲಕೇರಿ ಗ್ರಾಮದ ಯಮನೂರಸಾಬ ಅವರ ಜೊತೆ ಜಹೀದಾಬೇಗಂ ನವಜೀವನಕ್ಕೆ ಕಾಲಿಟ್ಟರು. ಈ ವೇಳೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮದುವೆಗೆ ಆಗಮಿಸಿದ್ದ ಬಂಧುಗಳಲ್ಲಿ ವಧು-ವರರ ಜೊತೆ ವೇದಿಕೆಯ ಮೇಲಿನಿಂದಲೇ ಮತದಾನದ ಕುರಿತು ಜಾಗೃತಿ ಮೂಡಿಸಿದರು.
ತಾ.ಪಂ ಇಓ ವಿಶ್ವನಾಥ ಹೊಸಮನಿ ಈ ಸಂದರ್ಭದಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಅವಕಾಶ ನಿಮ್ಮದಾಗಿದೆ. ಪ್ರತಿಯೊಬ್ಬರೂ ಹಕ್ಕು ಚಲಾಯಿಸಿ, ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವ ಯಶಸ್ವಿಗೊಳಿಸಬೇಕು. ಮತದಾನದಿಂದ ಯಾರೂ ದೂರ ಉಳಿಯಬಾರದು ಎಂದರು.
ವಧು-ವರರಿಗೆ ಹಾಗೂ ಮದುವೆಗೆ ಹಾಜರಾದವರಿಗೆ ಚುನಾವಣೆಯಲ್ಲಿ ಮತದಾನ ನಮ್ಮ ಹಕ್ಕು ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕೆಂದು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಪಿಡಿಓ ಫಕ್ರುದ್ದೀನ್ ನಧಾಪ, ಸಂತೋಷ ಮೇಟಿ, ಅಕ್ಕಮಹಾದೇವಿ ರುದ್ರೇಶ್ವರಮಠ, ತಾ.ಪಂ ಸಿಬ್ಬಂದಿಗಳಾದ ಎಚ್.ಎಂ. ಕಾತರಕಿ, ಸಿ.ಬಿ. ಪಾಟೀಲ, ಅಶೋಕ ಅಣ್ಣಿಗೇರಿ, ಸಿದ್ದು ಮಡಿವಾಳರ, ಮೋಹನ ಹೊಂಬಳ, ಗ್ರಾ.ಪಂ ಸಿಬ್ಬಂದಿಗಳು ಸೇರಿದಂತೆ ಇತರರಿದ್ದರು.