ವಿಜಯಸಾಕ್ಷಿ ಸುದ್ದಿ, ಡಂಬಳ : ಮಹತ್ವಯುತವಾದ, ನಮ್ಮ ನಿಮ್ಮೆಲ್ಲರ ಭವಿಷ್ಯದ ನಿಧಿಯಾಗಿರುವ ಸಂವಿಧಾನ ಕಲ್ಪಿಸಿರುವ ಪ್ರಜಾಪ್ರಭುತ್ವದ ಮೈಲುಗಲ್ಲು, ಅಮೂಲ್ಯವಾದ ಮತದಾನದಲ್ಲಿ ಎಲ್ಲರೂ ಪಾಲ್ಗೊಳ್ಳುವುದರ ಜೊತೆಗೆ ದೇಶದ ಶಕ್ತಿಯನ್ನು ಗಟ್ಟಿಗೊಳಿಸಲು ಮುಂದಾಗಬೇಕು ಎಂದು ಮುಂಡರಗಿ ಇಒ ವಿಶ್ವನಾಥ ಹೊಸಮನಿ ಕರೆ ನೀಡಿದರು.
ಡಂಬಳ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ 18ನೇ ಲೋಕಸಭಾ ಚುನಾವಣೆಯ 543 ಸ್ಥಾನಗಳಿಗೆ ದೇಶಾದ್ಯಂತ 7 ಹಂತದಲ್ಲಿ ಜರುಗುತ್ತಿರುವ ಚುನಾವಣೆಯ 2ನೇ ಹಂತದಲ್ಲಿ ಜರಗುತ್ತಿರುವ ಹಿನ್ನೆಲೆಯಲ್ಲಿ ಸಿಂಗರಿಸಲ್ಪಟ್ಟ 232 ಥೀಮ್ ಮತಗಟ್ಟೆಗೆ ಭೇಟಿ ನೀಡಿ ಅವರು ಮಾತನಾಡಿದರು.
ಶಿರಹಟ್ಟಿ ಮತಕ್ಷೇತ್ರದ ಮುಂಡರಗಿ ತಾಲೂಕಿನ 8 ಗ್ರಾ.ಪಂಗಳಲ್ಲಿ 61 ಬೂತ್ಗಳು, ರೋಣ ಮತಕ್ಷೇತ್ರದ ಡಂಬಳ ಹೋಬಳಿಯ 11 ಗ್ರಾ.ಪಂ ವ್ಯಾಪ್ತಿಯಲ್ಲಿ 61 ಮತಗಟ್ಟೆಗಳು ಇದ್ದು, ಅದರಲ್ಲಿ ಶಿವಾಜಿ ನಗರದ 215ನೇ ಮತದಾನ ಕೇಂದ್ರವನ್ನು ಯುವ ಮತಗಟ್ಟೆ ಕೇಂದ್ರ, ಡೋಣಿ ಗ್ರಾಮದ 241ನೇ ಮತಗಟ್ಟೆ ಸಳಿ ಮತಗಟ್ಟೆ, ಡಂಬಳ ಗ್ರಾಮದ ಸರಕಾರಿ ಹೆಣ್ಣುಮಕ್ಕಳ ಶಾಲೆಯ 232 ಮತಗಟ್ಟೆ ಕೇಂದ್ರವನ್ನು ಏಕತೆ ಸಾರುವ ಥೀಮ್ ಮತಗಟ್ಟೆ, ಮುಂಡರಗಿ ನಗರದಲ್ಲಿ ಗಾಂಧಿ ಸಮುದಾಯ ಭವನ ಮತ್ತು ಕೋಟೆ ಶಾಲೆಯಲ್ಲಿ ಸಖಿ ಮತಗಟ್ಟೆಯನ್ನಾಗಿಸಿದೆ.
ಮುಂಜಾನೆ 7 ಗಂಟೆಯಿಂದ ಪ್ರಾರಂಭವಾಗಿ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ಜರುಗಲಿದ್ದು,ಎಲ್ಲರೂ ಮತದಾನದ ಮತೋತ್ಸವದಲ್ಲಿ ಪಾಲ್ಗೊಂಡು ಸಂತೋಷದಿಂದ ಮತದಾನದ ಹಕ್ಕನ್ನು ಚಲಾಯಿಸಿ. ನಿಮ್ಮ ಜವಾಬ್ದಾರಿಯನ್ನು ಮರೆಯದಿರಿ, ಬೇರೆಯವರಿಗೂ ಮತದಾನದಲ್ಲಿ ಪಾಲಗೊಳ್ಳುವಂತೆ ಪ್ರೇರೇಪಿಸಿ ಎಂದು ಹೇಳಿದರು.
ಪಂಚಾಯತ ರಾಜ್ ಸಹಾಯಕ ನಿದೇರ್ಶಕ ಪ್ರವೀಣ ಗೋಣೆಮ್ಮನವರ, ಡಂಬಳ ಭಾಗದ ಪೊಲೀಸ್ ಚುನಾವಣಾ ಸೆಕ್ಟರ್ ಅಧಿಕಾರಿ ಎಎಸ್ಐ ಮಾರುತಿ ಜೋಗದಂಡಕರ, ತಾ.ಪಂ ವ್ಯವಸ್ಥಾಪ ಫಕ್ರುದ್ದಿನ್ ನಧಾಪ್, ಶಾಲಾ ಮುಖ್ಯೊಪಾಧ್ಯಾಯರು, ಗುರುವೃಂದ, ಗ್ರಾ.ಪಂ ಸಿಬ್ಬಂದಿ ವರ್ಗದವರು ಇದ್ದರು.
ಪಿಡಿಒ ಶಶಿಧರ ಎಮ್.ಹೊಂಬಳ ಮಾತನಾಡಿ, ಪ್ರಜಾಪ್ರಭುತ್ವವುಳ್ಳ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಕಲ್ಪಿಸಿಕೊಟ್ಟಿರುವ ಅಮೂಲ್ಯವಾದ ಮತದಾನದ ಮೂಲಭೂತ ಹಕ್ಕನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರ ಪಡೆದುಕೊಂಡಿರುವ ಎಲ್ಲಾ ಮತದಾರರು ಮತ ಚಲಾಯಿಸಬೇಕು. ಯಾರೂ ಕೂಡಾ ನಿಷ್ಕಾಳಜಿಯನ್ನು ತೋರದೆ ಮತ ಚಲಾಯಿಸಬೇಕು ಎಂದು ಹೇಳಿದರು.