ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರತಿಯೊಬ್ಬರ ಮತದಾನವೂ ಅಮೂಲ್ಯವಾದುದು. ಅದನ್ನು ಬೇಕಾಬಿಟ್ಟಿಯಾಗಿ ಚಲಾಯಿಸಬಾರದು. ತಪ್ಪು ಮತದಾನ ಅಸಮರ್ಥ ನಾಯಕನ ಆಯ್ಕೆಗೆ ಕಾರಣವಾಗುತ್ತದೆ ಎಂದು ಅಭಿವೃದ್ಧಿ ಅಧಿಕಾರಿ ಪಾರ್ವತಿ ಹೊಂಬಳ ಹೇಳಿದರು.
ಡಂಬಳ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಆವರಣದಲ್ಲಿ ಗದಗ ಜಿಲ್ಲಾ ಪಂಚಾಯಿತಿ, ಮುಂಡರಗಿ ತಾಲೂಕು ಪಂಚಾಯಿತಿ, ಡಂಬಳ ಗ್ರಾಮ ಪಂಚಾಯಿತಿಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮತದಾನವನ್ನು ಪಾವಿತ್ರ್ಯತೆಗೆ ಹೋಲಿಸುತ್ತಾರೆ. ಈ ಪವಿತ್ರ ಮತಗಳನ್ನು ಅರ್ಹರಿಗೆ ಚಲಾಯಿಸಿ ಸಮರ್ಥರನ್ನು ಚುನಾಯಿಸಬೇಕು. ಮತದಾನ ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಡಿ.ಕೆ. ಹೊಳೆಮ್ಮನವರ, ಗ್ರಾ.ಪಂ ಕಾರ್ಯದರ್ಶಿ ಚಾಂದಮುನ್ನಿ ನೂರಭಾಷಾ ಮಾತನಾಡಿ, ಪ್ರಜೆಗಳು ದೇಶದ ಪ್ರಾಣಧಾತು ಇದ್ದಂತೆ. ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಆ ದೇಶದ ಮೌಲ್ಯ ನಿರ್ಣಯವಾಗುತ್ತದೆ. ಪ್ರಜಾಪ್ರಭುತ್ವದ ಗೆಲವು ಆಗಬೇಕಾದರೆ ಸಜ್ಜನರನ್ನು ಚುನಾಯಿಸುವ ಶಕ್ತಿ ಮತದಾನಕ್ಕಿದೆ ಎಂಬುದನ್ನು ದೃಢಪಡಿಸಲು ಮುಂದಾಗಬೇಕು ಎಂದು ಹೇಳಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನದ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಎಸ್ಡಿಎಮ್ಸಿ ಅಧ್ಯಕ್ಷ ಎಂ.ಜೆ. ಕಾಸ್ತಾರ, ಶಿಕ್ಷಕಿಯರಾದ ಸುಸನ್ನಾ ಕನವಳ್ಳಿ, ಹಸೀನಾ ಬಸರಿ, ನುಜಹತ್ತ ಶೈಕ್, ತಸ್ಲಿಮಾ ಪಟವಾರಿ, ಗ್ರಾ.ಪಂ ಸಿಬ್ಬಂದಿಗಳಾದ ಫರಾನಾ ಸೋಟಕ್ಕನಾಳ, ಭೀಮನಗೌಡ ತಿಪ್ಪಾಪುರ, ಸರಳಾ ಯಾವಗಲ್ಲ, ಭೀಮವ್ವ ಬಂಡಿ, ಅಂಗನವಾಡಿ ಕಾರ್ಯಕರ್ತೆಯರಾದ ಎನ್.ಎಫ್. ಆನಿ, ಶೋಭಾ ಹಿರೇಮಠ, ವಿ.ಜಿ. ಬಡಿಗೇರ, ಸಾಮಕ್ಕ ನಡವಲಕೇರಿ, ಎಸ್ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಇದ್ದರು.
ಗ್ರಾ.ಪಂ ಕರ ವಸುಲಿಗಾರ ಯಲ್ಲಪ್ಪ ಹಾದಿಮನಿ, ಗ್ರಂಥಪಾಲಕರ ಅಧ್ಯಕ್ಷ ಗವಸಿದ್ದಪ್ಪ ಹಳ್ಳಾಕಾರ ಮಾತನಾಡಿ, ಮತದಾನದ ಕುರಿತು ಯುವಜನರಲ್ಲಿ ಪ್ರಜ್ಞೆ ಮೂಡಿಸಬೇಕು. ಹೊಸ ಮತದಾರರು ಮತ ಚಲಾಯಿಸುವಂತೆ ಪ್ರೇರೇಪಿಸಬೇಕು. ನಾವು ಒಬ್ಬರು ಮತ ಚಲಾಯಿಸದಿದ್ದರೆ ಏನೂ ಆಗುವುದಿಲ್ಲವೆಂಬ ಉದಾಸೀನ ಬೇಡ. ಸಮರ್ಥರು ಚುನಾಯಿತಗೊಳ್ಳಲು ಮತ ಚಲಾಯಿಸಬೇಕು. ಆಸೆ ಆಮಿಷಗಳಿಗೆ ಬಲಿಯಾಗದೆ ಮತ ಹಾಕಿ ಎಂದು ಹೇಳಿದರು.



