ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ನೌಕರರು ಒತ್ತಡದ ನಡುವೆಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯವು ದೇಶದ ಆದಾಯ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿದ್ದರೂ ಬೇರೆ ರಾಜ್ಯಗಳಿಗಿಂತ ಕಡಿಮೆ ಸಂಬಳ ಇದೆ. ಕೇಂದ್ರ ಮಾದರಿಯ ಸಂಬಳ ರಾಜ್ಯ ನೌಕರರಿಗಿಲ್ಲ. ಕೇಂದ್ರ ಮಾದರಿ ವೇತನ ಜಾರಿ ಆಗುವವರೆಗೂ ವಿಶ್ರಮಿಸುವುದಿಲ್ಲ ಎಂದು ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.
ನಗರದ ಭೀಮಸೇನ ಜೋಶಿ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ರಾಜಾಧ್ಯಕ್ಷ ಸಿ.ಎಸ್. ಷಡಕ್ಷರಿಯವರ ಸನ್ಮಾನ ಕಾರ್ಯಕ್ರಮ ಹಾಗೂ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆಗಳೇ ಇಲ್ಲ. ಸದ್ಯದಲ್ಲೇ ಹೊಸ ಆರೋಗ್ಯ ಯೋಜನೆ (ನಗದು ರಹಿತ) ಜಾರಿ ಮಾಡಲು ಸರ್ಕಾರದೊಂದಿಗೆ ಅಂತಿಮ ಮಾತುಕತೆ ನಡೆದಿದೆ. ಪಾರದರ್ಶಕ ಆಡಳಿತ ವ್ಯವಸ್ಥೆ ಇದ್ದರೆ ಇದೆಲ್ಲವೂ ಸಾಧ್ಯವಿದೆ ಎಂದರು.
ರಾಜಾಧ್ಯಕ್ಷ ಚುನಾವಣೆಯಲ್ಲಿ ಸಂಘದ ಇತಿಹಾಸ ಅರಿಯದವರು, ಸಂಘದ ಆಳ-ಅಗಲ ಗೊತ್ತಿಲ್ಲದವರು, ಇಲಾಖೆ ಬಗ್ಗೆ ಮಾಹಿತಿ ಇಲ್ಲದವರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಂಘದ ಕೆಲಸಗಳನ್ನು ಗುರುತಿಸದೇ ಮತ ಚಲಾಯಿಸಲಾಗುತ್ತಿದೆ. ಹೀಗಿದ್ದಾಗ ಚುನಾವಣೆಗೆ ಯಾಕೆ ನಿಲ್ಲಬೇಕು ಎಂದು ನೋವಾಗುತ್ತಿದೆ ಎಂದರು.
ಜಿಲ್ಲಾಧ್ಯಕ್ಷ ರವಿ ಗುಂಜೀಕರ ಮಾತನಾಡಿ, ಏಳನೇ ವೇತನ ಆಯೋಗ ರಚಿಸುವಲ್ಲಿ ರಾಜಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ಪಾತ್ರ ದೊಡ್ಡದಿದೆ. ಆಯೋಗ ರಚನೆ ನಂತರ ಸರ್ಕಾರ ಬದಲಾದರೂ ಏಳನೇ ವೇತನ ಆಯೋಗ ಜಾರಿ ಆಗಲು ಶ್ರಮಿಸಿದರು. 2025ರಲ್ಲಿ ಎನ್ಪಿಎಸ್ ಬದಲಾಗಿ ಓಪಿಎಸ್ ಜಾರಿ ಮಾಡಲು ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುವ ಕಾರ್ಯವನ್ನು ಷಡಕ್ಷರಿ ಅವರು ಮಾಡಿದ್ದಾರೆ. ನೌಕರ ಪರವಾಗಿ ಇರುವ ನಾಯಕರನ್ನು ನಾವು ಆಯ್ಕೆ ಮಾಡಬೇಕು. ಅದರಂತೆ ನೌಕರ ಪರವಾಗಿ ಇರುವ ಷಡಕ್ಷರಿ ಅವರನ್ನು ನಮ್ಮ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.
ನೌಕರ ಸಂಘದ ರಾಜ್ಯ ಘಟಕ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಸಂಘವು ಸ್ಥಾಪಿತವಾಗಿ 104 ವರ್ಷ ಕಳೆದವು. ಇಷ್ಟು ಅವಧಿಯಲ್ಲಿ ಅತೀ ಹೆಚ್ಚು ಪರಿಣಾಮಕಾರಿ ಕೆಲಸ ಮಾಡಿದವರು ಸಿ.ಎಸ್. ಷಡಕ್ಷರಿ. ಭವಿಷ್ಯದಲ್ಲಿ ಅವರ ಮಾರ್ಗದರ್ಶನದಲ್ಲಿ ಸಂಘದ ಹಲವು ಉತ್ತಮ ಕಾರ್ಯಗಳು ನಡೆಯುತ್ತವೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸಿ.ಎಸ್. ಷಡಕ್ಷರಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಡೊಳ್ಳು ಕುಣಿತ, ಕುಂಭ ಮೇಳದೊಂದಿಗೆ ತರಲಾಯಿತು. ವೇದಿಕೆಯಲ್ಲಿ ವಿವಿಧ ಕಲಾತಂಡಗಳಿAದ ನೃತ್ಯ ಕಾರ್ಯಕ್ರಮಗಳು ಜರುಗಿದವು.
ಬಸವರಾಜ ಬಳ್ಳಾರಿ, ಎಸ್.ಎಫ್. ಸಿದ್ದನಗೌಡರ, ಬಿ.ಎ. ಕುಂಬಾರ, ವಿರೇಶ ಒಡಯನಪುರ, ಶಿವಾನಂದ ಎಂ, ಬಿ.ಟಿ. ವಾಲ್ಮಿಕಿ, ಎಂ.ಎನ್. ನಿಟ್ಟಾಲಿ, ಸಿದ್ದಪ್ಪ ಲಿಂಗದಾಳ, ಮಾರುತಿ ಮಂಗಳಾಪುರ, ಎಂ.ಎ. ಹಾದಿಮನಿ, ನಾಗರಾಜ ಜೆ, ಎಸ್.ಬಿ. ದಾನಪ್ಪಗೌಡರ, ಮಲ್ಲಿಕಾರ್ಜುನ ಹಿರೇಮಠ, ನಾಗರಾಜ ಹಳ್ಳಿಕೇರಿ, ಶಿವಪ್ಪ ಹದ್ಲಿ ಸೇರಿದಂತೆ ಹಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಸದಸ್ಯರು ಇದ್ದರು.
ಇಂದಿನ ಚುನಾವಣೆಯಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಡವಾಳ ಇದ್ದವರು ಚುನಾವಣೆ ಸ್ಪರ್ಧಿಸಿ ಆಮಿಷ, ಆಸೆಗಳನ್ನು ಒಡ್ಡಿ ಚುನಾವಣೆ ನಡೆಸಿದ್ದಾರೆ. ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ತೀರ್ಮಾನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಪಾರದರ್ಶಕ ಚುನಾವಣೆ ನಡೆಯುವಂತೆ ವ್ಯವಸ್ಥೆ ನಿರ್ಮಿಸಲು ಶ್ರಮೀಸುತ್ತಿದ್ದೇನೆ.
– ಸಿ.ಎಸ್. ಷಡಕ್ಷರಿ.
ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರು.