ಹಾವೇರಿ :ರಾಜ್ಯದ ಹಲವೆಡೆ ವಕ್ಫ್ ಆಸ್ತಿ ವಿವಾದ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಹಾವೇರಿ ಜಿಲ್ಲೆಗೂ ಕಾಲಿಟ್ಟಿದೆ. ಬೇರೆ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಿದ್ದರೆ, ಹಾವೇರಿಯಲ್ಲಿ ಒಂದು ಹಂತ ಮುಂದಕ್ಕೆ ಹೋಗಿದೆ.
ವಕ್ಫ್ ಮಂಡಳಿಯಿಂದ ತಮ್ಮ ಭೂಮಿ ಕಳೆದುಕೊಳ್ಳುವ ಭಯದಲ್ಲಿ ರೈತರ ಗುಂಪೊಂದು ಮುಸ್ಲಿಂ ಮುಖಂಡರ ನಿವಾಸಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬುಧವಾರ ಜಿಲ್ಲೆಯಲ್ಲಿ ನಡೆದಿದೆ. ಭಯದಿಂದ ಮುಸ್ಲಿಂ ಕುಟುಂಬಗಳು ಊರನ್ನೇ ತೊರೆದಿದ್ದಾರೆ.
ಕಡಕೋಳ ಗ್ರಾಮದಲ್ಲಿ ಬುಧವಾರ ರಾತ್ರಿ ಗಲಾಟೆಯೇ ನಡೆದಿದೆ. ಮಸೀದಿ ಸುತ್ತಮೂತ್ತಲಿನ 60ಕ್ಕೂ ಅಧಿಕ ಮನೆಗಳು, ಮೂರು ದೇವಾಸ್ಥಾನ ಮತ್ತು ಗರಡಿ ಮನೆಗಳು ವಕ್ಫ್ ಆಸ್ತಿಗೆ ಹೋಗುತ್ತಿವೆ ಅನ್ನು ಸುತ್ತೋಲೆಯನ್ನು ನೋಡಿದ ಜನರು ಏಕಾಏಕಿ ಗ್ರಾಮದಲ್ಲಿ ಗಲಾಟೆ ನಡೆಸಿದ್ದಾರೆ. ಈಗ ಬಂಧನ ಭೀತಿಯಿಂದ ಗಲಾಟೆ ನಡೆದ ಓಣಿಯ ಜನರು ಊರನ್ನೇ ಬಿಟ್ಟು ಓಡಿದ್ದಾರೆ. 8ಕ್ಕೂ ಅಧಿಕ ಮನೆಗಳು ಜಖಂಗೊಂಡಿದ್ದು, ಭಯದಿಂದ ಎರಡು ಸಮುದಾಯದ ಜನರು ಗ್ರಾಮವನ್ನು ಬಿಟ್ಟು ಹೋಗಿದ್ದಾರೆ.
ರಾಜ್ಯದ್ಯಂತ ಜಮೀನು ವಕ್ಫ್ ಬೋರ್ಡ್ಗೆ ಸೇರಿರುವ ವಿಚಾರ ಚರ್ಚೆಗೆ ಕಾರಣವಾಗಿ ರಾಜಕೀಯ ಜಟಾಪಟಿ ಕೂಡ ನಡೆಯುತ್ತಿದೆ. ಎರಡು ವರ್ಷದ ಹಿಂದೆ ಕರಾವಳಿ ಭಾಗದಲ್ಲಿ ಆರಂಭವಾಗಿ ಭಾರಿ ಜಟಾಪಟಿಗೆ ಕಾರಣವಾಗಿದ್ದ ಧರ್ಮದ ದಂಗಲ್ ಮತ್ತೆ ಚರ್ಚೆಗೆ ಬಂದಿದೆ. ದೀಪಾವಳಿ ಸಂದರ್ಭ ಶ್ರೀರಾಮ ಸೇನೆ ಸಂಘಟನೆ ಹಿಂದೂಗಳು ಹಿಂದೂಗಳಿಂದ ಮಾತ್ರ ವ್ಯಾಪಾರ ಮಾಡಿ ಅನ್ಯ ಧರ್ಮೀಯರ ಜೊತೆ ವ್ಯವಹಾರ ಮಾಡಬೇಡಿ ಎಂದು ಬಹಿಷ್ಕಾರದ ಕರೆ ಕೊಟ್ಟಿದೆ, ಜೊತೆಗೆ ಅಭಿಯಾನಕ್ಕೂ ಕರೆ ಕೊಟ್ಟಿದ್ದಾರೆ.



