ಕಲಬುರಗಿ:- ಜಗತ್ತಿನಲ್ಲಿ ಯಾವ ದೇಶಗಳ ಮಧ್ಯೆಯೂ ಯುದ್ದ ಒಳ್ಳೆಯದಲ್ಲ. ಅಮೇರಿಕಾವು ಇರಾನ್ ಮೇಲೆ ದಾಳಿ ಮಾಡಿದ್ದು ತಪ್ಪು ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ‘ಅಮೆರಿಕವು ಇರಾನ್ ಮೇಲೆ ದಾಳಿ ಮಾಡಿದ್ದು ತಪ್ಪು ನಿರ್ಧಾರ. ಜಗತ್ತಿನಲ್ಲಿ ಯಾವ ದೇಶಗಳ ಮಧ್ಯೆಯೂ ಯುದ್ಧ ಒಳ್ಳೆಯದಲ್ಲ. ಎಂಥದ್ದೇ ಸಮಸ್ಯೆ ಇರಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು.
‘ಯುದ್ಧ ಮಾಡಿ ಎಲ್ಲಾ ನಾಶವಾದರೆ ಎಲ್ಲಿ ಬದುಕುತ್ತೀರಿ? ಈ ಹಿಂದಿನಿಂದಲೂ ನಮ್ಮ ಜೊತೆ ಇರಾನ್ ಒಳ್ಳೆಯ ಸಂಬಂಧ ಹೊಂದಿದೆ. ಅಲ್ಲಿಂದ ತೈಲ ಆಮದು ಮಾಡಿಕೊಳ್ಳುತ್ತಿದ್ದೇವೆ. ಇಡೀ ವಿಶ್ವಕ್ಕೆ ಬುದ್ಧನ ಶಾಂತಿ ಬೇಕಾಗಿದೆಯೇ ಹೊರತು ಯುದ್ಧ ಬೇಕಾಗಿಲ್ಲ’ ಎಂದರು. ‘ಇಸ್ರೇಲ್-ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದ ವೇಳೆ ಇನ್ನೊಬ್ಬರು ಮಧ್ಯಪ್ರವೇಶ ಮಾಡುವುದು ಒಳ್ಳೆಯ ಸಂದೇಶ ಕೊಡುವುದಿಲ್ಲ’ ಎಂದು ಅವರು ಅಮೆರಿಕದ ನಡೆಯನ್ನು ಟೀಕಿಸಿದರು. ‘ಪ್ರಧಾನಿ ಮೋದಿ ಅವರು ಭಾರತ-ಪಾಕಿಸ್ತಾನದ ಸಂಘರ್ಷದ ವೇಳೆ ಎಲ್ಲರೂ ಒಂದಾಗಿ ಅಂದಿದ್ದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಒಂದಾಗಿದ್ದೆವು. ಆದರೆ, ಮೋದಿಯವರೇ ಸರ್ವಪಕ್ಷ ಸಭೆಗೆ ಬರಲಿಲ್ಲ. ಇದು ಅವರ ಅಹಂಕಾರ ತೋರಿಸುತ್ತದೆ. ಎಲ್ಲರೂ ಒಂದಾಗಿರುವ ಸಂದೇಶ ಕೊಟ್ಟರೆ ಒಳ್ಳೆಯದು’ ಎಂದರು.
ಇನ್ನೂ ರಾಜ್ಯದಲ್ಲಿ ಶಾಸಕರ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಖರ್ಗೆ ನಿರಾಕರಿಸಿದ್ದು, ರಾಜ್ಯ ನಾಯಕರನ್ನೇ ಕೇಳಿ ಎಂದಿದ್ದಾರೆ.