20 ವರ್ಷದ ಬಳಿಕ ಖ್ಯಾತ ನಟಿ ಸೌಂದರ್ಯ ಸಾವಿನ ಸುದ್ದಿ ಮತ್ತೆ ಸದ್ದು ಮಾಡುತ್ತಿದೆ. 2004 ರಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸೌಂದರ್ಯ ಜೊತೆ ಅವರ ಸಹೋದರ ಕೂಡ ನಿಧನರಾಗಿದ್ದರು. ಇದೀಗ ಚಿಟ್ಟಿಬಾಬು ಎಂಬುವವರು ಸೌಂದರ್ಯ ಸಾವಿಗೆ ತೆಲುಗು ಖ್ಯಾತ ನಟ ಮೋಹನ್ ಬಾಬು ಅವರೇ ಕಾರಣ. ಆಸ್ತಿ ಕಾರಣದಿಂದ ಸೌಂದರ್ಯ ಅವರನ್ನು ಸಾಯಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ಸುದ್ದಿ ದೊಡ್ಡದಾಗಿ ಸದ್ದು ಸೌಂದರ್ಯ ಅವಪತಿ ಜಿಎಸ್ ರಘು ಪ್ರತಿಕ್ರಿಯೆ ನೀಡಿದ್ದಾರೆ.
‘ಮೋಹನ್ ಬಾಬು ಅವರು ಸೌಂದರ್ಯ ಅವರ ಕೊಲೆ ಮಾಡಿಸಿದ್ದಾರೆ ಎಂಬುದು ಪೂರ್ಣವಾಗಿ ಸುಳ್ಳು, ಆಧಾರರಹಿತ’ ಎಂದಿದ್ದಾರೆ. ಮೋಹನ್ ಬಾಬು ಅವರು ಅಕ್ರಮವಾಗಿ ಸೌಂದರ್ಯ ಅವರ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ ಎಂಬ ಆರೋಪವನ್ನೂ ತಳ್ಳಿ ಹಾಕಿರುವ ರಘು, ‘ಕಳೆದ ಕೆಲವು ದಿನಗಳಿಂದ ಹೈದರಾಬಾದ್ನಲ್ಲಿರುವ ಮೋಹನ್ ಬಾಬು ಮತ್ತು ಶ್ರೀಮತಿ ಸೌಂದರ್ಯ ಅವರ ಆಸ್ತಿಯ ಬಗ್ಗೆ ಸುಳ್ಳು ಸುದ್ದಿಗಳು ಹರಡುತ್ತಿದೆ. ಆಸ್ತಿಯ ಬಗ್ಗೆ ಹರಡಿರುವ ಆಧಾರರಹಿತ ಸುದ್ದಿಯನ್ನು ನಾನು ನಿರಾಕರಿಸುತ್ತೇನೆ. ಮೋಹನ್ ಬಾಬು, ನನ್ನ ಪತ್ನಿ ದಿವಂಗತ ಶ್ರೀಮತಿ ಸೌಂದರ್ಯ ಅವರಿಂದ ಅಕ್ರಮವಾಗಿ ಯಾವುದೇ ಆಸ್ತಿಯನ್ನು ವಶಪಡಿಸಿಕೊಂಡಿಲ್ಲ ಎಂದು ನಾನು ದೃಢೀಕರಿಸುತ್ತೇನೆ. ನನಗೆ ತಿಳಿದ ಮಟ್ಟಿಗೆ ನಾವು ಅವರೊಂದಿಗೆ ಯಾವುದೇ ಭೂ ವ್ಯವಹಾರಗಳನ್ನು ನಡೆಸಿಲ್ಲ’ ಎಂದಿದ್ದಾರೆ.
‘ಮೋಹನ್ ಬಾಬು ಅವರು ನನಗೆ 25 ವರ್ಷದಿಂದಲೂ ಪರಿಚಯ, ನಮ್ಮ ಕುಟುಂಬದೊಟ್ಟಿಗೆ ಅತ್ಯಾಪ್ತ ಬಂಧವನ್ನು ಅವರು ಹೊಂದಿದ್ದಾರೆ. ನನ್ನ ಪತ್ನಿ, ನನ್ನ ಭಾಮೈದ, ನನ್ನ ಅತ್ತೆ ಅವರುಗಳು ಸಹ ಮೋಹನ್ ಬಾಬು ಅವರ ಬಗ್ಗೆ ಅಪಾರ ಗೌರವ ಇರಿಸಿಕೊಂಡಿದ್ದರು. ವೈಯಕ್ತಿಕವಾಗಿ ನಾನು ಮೋಹನ್ ಬಾಬು ಅವರನ್ನು ಗೌರವಿಸುತ್ತೇನೆ. ಅವರ ಮೇಲೆ ಹೇರಲಾಗುತ್ತಿರುವ ಸುಳ್ಳು ಆರೋಪದ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಸೌಂದರ್ಯ ಅವರ ಸಾವು ಅಪಘಾತವೇ ಹೊರತು ಮತ್ತೇನೂ ಅಲ್ಲ. ವಿನಾಕಾರಣ ಸುಳ್ಳು ಸುದ್ದಿ ಹರಡುವುದು ಬೇಡವೆಂದು ನಾನು ಮನವಿ ಮಾಡುತ್ತೇನೆ’ ಎಂದಿದ್ದಾರೆ.