ಬೆಂಗಳೂರು:-ಕುಡಿಯುವ ನೀರನ್ನು ದುರ್ಬಳಕೆ ಮಾಡದಂತೆ ಇತ್ತೀಚೆಗೆ ಬೆಂಗಳೂರು ಜಲಮಂಡಳಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಕುಡಿಯುವ ನೀರು ವ್ಯರ್ಥ ಮಾಡಿದವರಿಗೆ ದಂಡಾಸ್ತ್ರ ಪ್ರಯೋಗ ಮಾಡಿದೆ.
ಕಳೆದ ಒಂದು ವಾರದಲ್ಲಿ 112 ಪ್ರಕರಣಗಳನ್ನು ಪತ್ತೆಹಚ್ಚಿ, ಕುಡಿಯುವ ನೀರನ್ನು ಅನಗತ್ಯ ಪೋಲು ಮಾಡಿದವರಿಂದ 5.60 ಲಕ್ಷ ರೂ.ಗಳ ದಂಡ ವಸೂಲಿಗೆ ಕ್ರಮ ಕೈಗೊಂಡಿದೆ.
ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ಫೆ.17ರಂದು ನಿಷೇಧದ ಆದೇಶ ಹೊರಡಿಸಿದ ನಂತರ ಜಲಮಂಡಳಿ, ಕುಡಿಯುವ ನೀರಿನ ಬಳಕೆ ಬಗ್ಗೆ ತಪಾಸಣೆ ಕೈಗೊಂಡಿದೆ. ಕಾರು, ಬೈಕ್ ಸೇರಿದಂತೆ ವಾಹನಗಳ ಸ್ವಚ್ಛತೆಗೆ, ಮನೆಯ ಅಂಗಳ ಸ್ವಚ್ಛತೆಗೆ, ಗಾರ್ಡನ್ ಗಿಡಗಳ ಪೋಷಣೆ ಸೇರಿದಂತೆ ಬೇರೆ ಬೇರೆ ಉದ್ದೇಶಗಳಿಗೆ ಕುಡಿಯುವ ನೀರು ಬಳಸುವಂತಿಲ್ಲ. ಅಂತಹ ಪ್ರಕರಣಗಳನ್ನು ಪತ್ತೆಹಚ್ಚಿ ದಂಡ ವಿಧಿಸುವ ಅಭಿಯಾನವನ್ನು ಕೈಗೊಂಡಿತು. ಈ ವೇಳೆ ಕಂಡು ಬಂದ ವ್ಯರ್ಥ ನೀರು ಖರ್ಚು ಮಾಡುವವರ ವಿರುದ್ಧ ಜಲಮಂಡಳಿ ದಂಡದ ಬಿಸಿ ಮುಟ್ಟಿಸಿದೆ.