ವಿಜಯಸಾಕ್ಷಿ ಸುದ್ದಿ, ರೋಣ: ಬೆಣ್ಣೆಹಳ್ಳದ ಹರಿವು ತಾಲೂಕಿನ ಅಸೂಟಿ ಗ್ರಾಮವನ್ನು ಸುತ್ತುವರೆದಿದ್ದು, ಹತ್ತಾರು ಕುಟುಂಬಗಳು ಸಂಕಷ್ಟದ ಸ್ಥಿತಿ ಎದುರಿಸುತ್ತಿವೆ. ತಾಲೂಕಿನಲ್ಲಿ ಮಳೆಯ ಅರ್ಭಟ ಕಡಿಮೆಯಾಗಿದ್ದರೂ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಣ್ಣೆಹಳ್ಳ ಮೈದುಂಬಿ ಹರಿಯುತ್ತಿದೆ.
ಕಳೆದ ಎರಡು ದಿನಗಳಿಂದ ನಿರಂತರವಾಗಿ ಭೋರ್ಗರೆಯುತ್ತಿರುವ ಬೆಣ್ಣೆಹಳ್ಳ ಇನ್ನೂ ತಣ್ಣಗಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ತಹಸೀಲ್ದಾರ ನಾಗರಾಜ ಕೆ, ಇಒ ಚಂದ್ರಶೇಖರ್ ಕಂದಕೂರ, ಪಿಡಿಒ ಬಸವರಾಜ ಗಿರಿತಮ್ಮನವರ, ಗ್ರಾಮಲೆಕ್ಕಾಧಿಕಾರಿ ಸಂತೋಷ ಪೂಜಾರ ಸ್ಥಳದಲ್ಲಿ ಮೊಕ್ಕಾಂ ಹೂಡಿ, ಗ್ರಾಮಸ್ಥರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಬೆಣ್ಣೆಹಳ್ಳ ಅಸೂಟಿ ಗ್ರಾಮವನ್ನು ಆವರಿಸಿಕೊಂಡಿದ್ದು, ಗ್ರಾಮದ ಹತ್ತಾರು ಮನೆಗಳು ನೀರಲ್ಲಿ ಮುಳುಗಿವೆ. ಹೊಳೆಆಲೂರ ಮಾರ್ಗ ಹೊರತಾಗಿ ಉಳಿದ ಮಾರ್ಗಗಳು ಸಂಪರ್ಕ ಕಳೆದುಕೊಂಡಿವೆ. ಕೃಷಿ ಅಧಿಕಾರಿ ರವೀಂದ್ರ ಪಾಟೀಲ ಕೂಡ ಗ್ರಾಮದಲ್ಲಿದ್ದು, ಕೃಷಿ ಭೂಮಿಗಳಲ್ಲಿ ಆಗಿರುವ ಹಾನಿ ಪ್ರಮಾಣವನ್ನು ಪರಿಶೀಲಿಸಿದ್ದಾರೆ.
ಪ್ರವಾಹ ಪೀಡಿತ ಹಾಗೂ ಬೆಣ್ಣೆಹಳ್ಳದ ನೀರಿಗೆ ಸಿಲುಕಿಕೊಂಡಿರುವ ಗ್ರಾಮಗಳಿಗೆ ಶುಕ್ರವಾರ ಜಿ.ಪಂ ಸಿಇಒ ಭರತ್ ಎಸ್ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು. ಮಲಪ್ರಭಾ ನದಿಯ ನೀರು ಬಿಟ್ಟಿಲ್ಲವಾದ್ದರಿಂದ ಭಯ ಬೇಡ. ಆದರೆ ಜಾಗೃತಿಯಿಂದ ಇರಬೇಕು. ಮುಖ್ಯವಾಗಿ ತಗ್ಗು ಪ್ರದೇಶಗಳಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿ ಆಡಳಿತದೊಂದಿಗೆ ಕೈಜೋಡಿಸಬೇಕು ಎಂದರು.
“ಹಿರಿಯ ಅಧಿಕಾರಿಗಳ ಮಾರ್ಗದರ್ಶನಂದತೆ ಸ್ಥಳದಲ್ಲಿ ಬಿಡಾರ ಹೂಡಲಾಗಿದೆ. ಅಗತ್ಯ ಬಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದ್ದಾರೆ. ಕಂದಾಯ, ತಾ.ಪಂ, ಜಿ.ಪಂ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಜನರ ಯೋಗಕ್ಷೇಮವನ್ನು ವಿಚಾರಿಸುವ ಜೊತೆಗೆ ಗ್ರಾಮಸ್ಥರಲ್ಲಿ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಹಾನಿಗೊಳಗಾದ ಬೆಳೆಗಳ ವೀಕ್ಷಣೆ ಕಾರ್ಯವನ್ನು ಕೃಷಿ ಇಲಾಖೆ ಮಾಡುತ್ತಿದೆ”
ಬಸವರಾಜ ಗಿರಿತಮ್ಮನವರ.
ಪಿಡಿಒ.