ಚೆನ್ನೈ: “ನಮ್ಮ ನದಿಗಳಿಗೆ ರಾಜಕೀಯ ಗಡಿಗಳು ತಿಳಿದಿಲ್ಲ. ನೀರು ನಮ್ಮನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು” ಎಂದು ತಮಿಳುನಾಡು ಸಿಎಂ ವಿಜಯ್ ಎದುರೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಕಾವೇರಿ’ ವಿಷಯ ಪ್ರಸ್ತಾಪ ಮಾಡಿದ್ದಾರೆ.
ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ 31ನೇ ಸಭೆಯಲ್ಲಿ ಮಾತನಾಡಿದ ಡಿಕೆಶಿ, ದಕ್ಷಿಣ ಭಾರತದ ವೇದಿಕೆಯಲ್ಲಿ ಹೆಮ್ಮೆಯ ಭಾರತೀಯನಾಗಿ ಹಾಗೂ 16 ಶತಮಾನಗಳಿಗೂ ಹೆಚ್ಚು ಸುದೀರ್ಘ ಇತಿಹಾಸ ಹೊಂದಿರುವ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ಕನ್ನಡಿಗನಾಗಿ ಮಾತನಾಡುತ್ತಿರುವುದಾಗಿ ಹೇಳಿದರು. ದಕ್ಷಿಣದ ಐದು ರಾಜ್ಯಗಳ ಜನಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯ ಶೇ.20ರಷ್ಟಿದ್ದರೂ, ದೇಶದ ಜಿಡಿಪಿಗೆ ಶೇ.33ರಷ್ಟು ಕೊಡುಗೆ ನೀಡುತ್ತಿರುವುದಾಗಿ ತಿಳಿಸಿದ ಅವರು, ದೇಶದ ಆರ್ಥಿಕ ಶಕ್ತಿಯ ಎಂಜಿನ್ನಲ್ಲಿ ಕರ್ನಾಟಕ ಅತ್ಯಂತ ಬಲವಾದ ಚಾಲನಾ ಶಕ್ತಿಯಾಗಿದೆ ಎಂದರು.
ಭಾರತದ ಸಾಫ್ಟ್ವೇರ್ ರಫ್ತಿನಲ್ಲಿ ಶೇ.42ರಷ್ಟು ಕೊಡುಗೆ ಕರ್ನಾಟಕದ್ದಾಗಿದ್ದು, 1,100 ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಹೊಂದುವ ಮೂಲಕ ಇತರ ರಾಜ್ಯಗಳಿಗಿಂತ ಅಗ್ರ ಸ್ಥಾನದಲ್ಲಿರುವುದಾಗಿ ಹೇಳಿದರು. 2019ರಿಂದ 2025ರ ನಡುವೆ ಭಾರತದ ನೇರ ವಿದೇಶಿ ಹೂಡಿಕೆಯ ಈಕ್ವಿಟಿ ಹರಿವಿನಲ್ಲಿ ಶೇ.21ಕ್ಕೂ ಹೆಚ್ಚು ಪಾಲು ಕರ್ನಾಟಕದ್ದಾಗಿದ್ದು, ಭಾರತದ ಕಾಫಿ ಉತ್ಪಾದನೆಯ ಶೇ.70 ಹಾಗೂ ಸಂಸ್ಕರಿಸಿದ ಸೌತೆಕಾಯಿ ರಫ್ತಿನ ಶೇ.90 ಕೊಡುಗೆ ಕರ್ನಾಟಕದ್ದಾಗಿದೆ ಎಂದು ವಿವರಿಸಿದ ಅವರು, ಬೆಂಗಳೂರು AI ರಾಜಧಾನಿಯಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದು, ನ್ಯೂಯಾರ್ಕ್, ಬೀಜಿಂಗ್, ಲಂಡನ್ ಮತ್ತು ಸಿಲಿಕಾನ್ ವ್ಯಾಲಿ ಜೊತೆ ಪೈಪೋಟಿ ನೀಡುತ್ತಿದೆ ಎಂದರು. ಈ ಸಾಧನೆಗಳಿಗೆ ನ್ಯಾಯಯುತ ಮನ್ನಣೆ ಮತ್ತು ಪ್ರೋತ್ಸಾಹ ನಿರೀಕ್ಷಿಸುತ್ತಿರುವುದಾಗಿ ಸಿಎಂ ತಿಳಿಸಿದರು.
ದೇಶದ ಆರ್ಥಿಕತೆ ಹೆಚ್ಚಿಸುವ ಪಾತ್ರವನ್ನು ಕರ್ನಾಟಕ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದ ಡಿಕೆಶಿ, ಕೊಟ್ಟಷ್ಟೇ ಪ್ರಮಾಣದಲ್ಲಿ ಕೇಂದ್ರ ಕೂಡ ಹಂಚಿಕೊಳ್ಳಬೇಕು ಎಂದು ಒತ್ತಾಯಿಸಿದರು. 15ನೇ ಹಣಕಾಸು ಆಯೋಗದ ಅಡಿಯಲ್ಲಿ ತೆರಿಗೆ ಪಾಲಿನಲ್ಲಿ ಕರ್ನಾಟಕದ ಪಾಲು ಶೇ.4.7ರಿಂದ ಶೇ.3.6ಕ್ಕೆ ಕುಸಿದಿದ್ದು, ಇದರಿಂದ ಆರು ವರ್ಷಗಳಲ್ಲಿ ಅಂದಾಜು ₹65,000 ಕೋಟಿ ನಷ್ಟವಾಗಿದೆ ಎಂದು ವಿವರಿಸಿದರು.
15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ₹5,495 ಕೋಟಿ ವಿಶೇಷ ಅನುದಾನ ಮತ್ತು ₹6,000 ಕೋಟಿ ರಾಜ್ಯ ನಿರ್ದಿಷ್ಟ ಅನುದಾನಗಳು ಇಂದಿಗೂ ಬಿಡುಗಡೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, 16ನೇ ಹಣಕಾಸು ಆಯೋಗ ಕರ್ನಾಟಕದ ಪಾಲನ್ನು ಶೇ.4.131ಕ್ಕೆ ಹೆಚ್ಚಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸುತ್ತಾ, ಇದನ್ನು ಮತ್ತೆ ಶೇ.4.7ಕ್ಕೆ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.



