ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಶ್ರೀ ಜಗದ್ಗುರು ರೇಣುಕಾಚಾರ್ಯರಂತೆಯೇ ನಾವೆಲ್ಲರೂ ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದು ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರರಾದ ಜೆ.ಬಿ. ಮಜ್ಜಗಿ ಹೇಳಿದರು.
ಬುಧವಾರ ತಾಲೂಕು ಆಡಳಿತಸೌಧದ ತಹಸೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾವೆಲ್ಲರೂ ಧರ್ಮದಿಂದ ಬದುಕಬೇಕು. ಜಯಂತಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದರು. ತಿರುಮಲಕೊಪ್ಪದ ರೇಣುಕ ಧರ್ಮ ನಿವಾಸದ ಗುರುಗಳಾದ ದಾನಯ್ಯ ದೇವರು ಮಾತನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವಗಳು ಮತ್ತು ಆದರ್ಶಗಳನ್ನು ಜನರಲ್ಲಿ ರೂಢಿಸಬೇಕು. ಧರ್ಮದ ಬಗ್ಗೆ ನಾವು ಮೊದಲು ಅರಿವು ಮೂಡಿಸಿಕೊಳ್ಳಬೇಕಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಡುಗೆ ಧರ್ಮಕ್ಕೆ ಅಷ್ಟೇ ಅಲ್ಲದೆ, ಶೈಕ್ಷಣಿಕ ಕ್ಷೇತ್ರ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಅವರು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕೆ.ಎಲ್.ಇ. ಸೊಸೈಟಿಯ ಸದಸ್ಯರಾದ ಶಂಕರಣ್ಣ ಮುನವಳ್ಳಿ ಮಾತನಾಡಿ, ಸಮಾಜಕ್ಕೆ ನಾವು ಅಮೂಲ್ಯ ಕೊಡುಗೆ ನೀಡಲು ಮುಂದಾಗಬೇಕು. ವಿವಿಧ ಜಯಂತಿ ಆಚರಣೆ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಭಾಗವಹಿಸಬೇಕು. ಜಾತಿ, ಪಂಥ, ಧರ್ಮ ಬಿಟ್ಟು ಎಲ್ಲ ಸಮಾಜದವರು ಒಟ್ಟಾಗಿ ಸೇರಿ ಸಮಾಜವನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಡಾ. ಎಚ್.ವಿ. ಬೆಳಗಲಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಶಿ ಸಮಾಜದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ ಜಿ.ವಿ. ಪಾಟೀಲ್, ಸಮಾಜದ ಮುಖಂಡರಾದ ನಿರಂಜನ ಹಿರೇಮಠ, ವಿಶ್ವನಾಥ ಹಿರೇಗೌಡ್ರ, ಶಿವಾನಂದ ಗುಂಜಾಳ, ಬಸವರಾಜ ಚಿಕ್ಕಮಠ, ಪ್ರಕಾಶ ಬೆಂಡಿಗೇರಿ, ನಿಂಗನಗೌಡ್ರ, ಸುಮಿತ್ರಾ ಶಿವಾನಂದ ಗುಂಜಾಳ, ರಮೇಶ ಪಾಟೀಲ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು. ಚನ್ನಯ್ಯ ಚೌಕಿಮಠ ನಿರೂಪಿಸಿದರು.