ವಿಜಯಸಾಕ್ಷಿ ಸುದ್ದಿ, ಗದಗ: ಬೇರೆ ಮತ ಪಂಥಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿಯೂ ಸಹ ಸನಾತನ ಹಿಂದೂ ಧರ್ಮದ ಬೇರುಗಳು ಗಟ್ಟಿಗೊಳ್ಳುತ್ತಾ ಸಾಗುತ್ತಿರುವುದಕ್ಕೆ ಹಿಂದೂ ಧರ್ಮದ ಕೊಡುಗೆ ಮತ್ತು ಹಿಂದೂ ಹೋರಾಟಗಾರರ ಅಪ್ರತಿಮ ಪ್ರಯತ್ನ ಕಾರಣವಾಗಿದೆ ಎಂದು ಪ್ರಮುಖ ವಾಗ್ಮಿ, ಹಿಂದೂ ಪರ ಹೋರಾಟಗಾರ ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.
ಅವರು ಶುಕ್ರವಾರ ಸಂಜೆ ಗದಗ ನಗರದ ಶ್ರೀ ಸುದರ್ಶನ ಚಕ್ರ ಯುವ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾದ ಹಿಂದೂ ಮಹಾಗಣಪತಿ ಸನ್ನಿಧಿಯಲ್ಲಿ ಆಯೋಜಿಸಲಾದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮತಾಂತರ, ಭಯೋತ್ಪಾದನೆ, ಲವ್ ಜಿಹಾದ್ನಂತಹ ದುಷ್ಕೃತ್ಯಗಳಿಂದ ದೇಶ ಗೆಲ್ಲುವ ಪ್ರಯತ್ನಗಳು ಹಿಂದಿನಲ್ಲೂ ನಿರಂತರವಾಗಿ ನಡೆಯುತ್ತಿವೆ. ಭಾರತವನ್ನು ಅಭದ್ರಗೊಳಿಸುವ ಶಕ್ತಿಗಳ ಪ್ರಯತ್ನ ಹಿಂದುತ್ವದ ಗಟ್ಟಿತನದಿಂದ ನಿರಂತರ ವಿಫಲವಾಗುತ್ತಿದೆ. ಆದರೆ ಈ ದೇಶದಲ್ಲಿ ಹಿಂದೂಗಳ ಸರ್ವನಾಶ ಮತ್ತು ಗುಡಿ-ಗುಂಡಾರಗಳ ಧ್ವಂಸಕ್ಕೆ ಕಾರಣನಾದ ದುರುಳ ಔರಂಗಜೇಬ ಇಂದು ಇಲ್ಲಿನ ಕೆಲವರಿಗೆ ಪ್ರೇರಣೆಯಾಗಿದ್ದಾನೆ. ಇಂಥವರಿಗೆ ಕುಮುಕ್ಕು ನೀಡುವವರಲ್ಲಿ ಕೆಲವರು ಹಿಂದೂಗಳೂ ಸೇರಿಕೊಂಡಿರುವುದು ವಿಪರ್ಯಾಸದ ಸಂಗತಿ ಎಂದರು.
ಯುದ್ಧಭೂಮಿಯಲ್ಲಿ ಬೋಧನೆಯಾದ ಭಗವದ್ಗೀತೆ ಸರ್ವಶ್ರೇಷ್ಠ ಗ್ರಂಥವಾಗಿದ್ದು, ಶ್ರೀಕೃಷ್ಣ ಅರ್ಜುನನಿಗೆ ಗೀತೆ ಬೋಧಿಸುವ ಅಂದಿನ ಕಾಲದಲ್ಲೂ ಸಹ ಸನಾತನ ಹಿಂದೂ ಧರ್ಮವಿತ್ತು ಎನ್ನುವುದಕ್ಕೆ ಸಾಕ್ಷಿಯಿದೆ. ಹಿಂದೂ ಸಾಮ್ರಾಜ್ಯ ಸ್ಥಾಪಕ ಶಿವಾಜಿ ಮಹಾರಾಜ್ ಹಾಗೂ ಸ್ವಾಮಿ ವಿವೇಕಾನಂದರು ಹಿಂದುತ್ವದ ಪ್ರತೀಕವಾಗಿದ್ದಾರೆ ಎಂದರು.
ಧರ್ಮದ ರಕ್ಷಣೆ ಮತ್ತು ಸಮೃದ್ಧ, ಸದೃಢ ಭಾರತದ ಕನಸು ನನಸಾಗಿಸುವಲ್ಲಿ ಹಿಂದೂ ಮಹಾಗಣಪತಿ ಪ್ರೇರಕ ಶಕ್ತಿಯಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಹಿಂದೂ ಮಹಾಗಣಪತಿ ಮಂಡಳಿಯ ಗೌರವಾಧ್ಯಕ್ಷ ಶ್ರೀಕಾಂತ ಖಟವಟೆ, ಅಧ್ಯಕ್ಷ ರವಿರಾಜ್ ಮಾಳೆಕೊಪ್ಪಮಠ, ರಾಘವೇಂದ್ರ ಹಬೀಬ್, ಎಸ್.ಹೆಚ್. ಶಿವನಗೌಡ, ರಾಜು ಕುರಡಗಿ, ಶ್ರೀಪತಿ ಉಡುಪಿ, ಸುಧೀರ್ ಕಾಟಿಗರ ಮುಂತಾದವರು ಉಪಸ್ಥಿತರಿದ್ದರು.
ಭಾರತದಲ್ಲಿ ಇಂದು ಜನರ ಮನಸ್ಥಿತಿ, ನಾಯಕತ್ವ ಬದಲಾವಣೆಯಾಗಿದೆ, ಭಾರತವೂ ಬದಲಾವಣೆಯಾಗಿದೆ. ನಾವೆಲ್ಲ ಇಂದು ನವ ಭಾರತದ ಕಾಲಘಟ್ಟದಲ್ಲಿದ್ದೇವೆ. ದುಷ್ಕೃತ್ಯಗಳಿಗೆ ತಕ್ಕ ಉತ್ತರ ನೀಡುವ ಸ್ಥಿತಿಯಲ್ಲಿ ಸುಭದ್ರ ಭಾರತ ನಮ್ಮೆದುರಿಗಿದೆ ಎಂದು ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.