ಹಾಸನದ ವಿದ್ಯಾನಗರದಲ್ಲಿ ನಟ ಯಶ್ ಅವರ ಕುಟುಂಬಕ್ಕೆ ಸೇರಿದ ನಿವೇಶನದ ಕಾಂಪೌಂಡ್ ಧ್ವಂಸ ಪ್ರಕರಣ ಇದೀಗ ಆಡಳಿತಾತ್ಮಕ ದೌರ್ಜನ್ಯ ಆರೋಪಗಳೊಂದಿಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಪುಷ್ಪಾ, “ನಾವು ಜಾಗಕ್ಕೆ ನಿಯಮಿತವಾಗಿ ಟ್ಯಾಕ್ಸ್ ಕಟ್ಟಿದ್ದೇವೆ. ಎಲ್ಲ ಕಾನೂನು ದಾಖಲೆಗಳು ನನ್ನ ಬಳಿ ಇವೆ” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಕೋರ್ಟ್ ಆದೇಶದ ನೆಪವೊಡ್ಡಿ ಕಾಂಪೌಂಡ್ ಧ್ವಂಸ ಮಾಡಿರುವುದು ಸಂಪೂರ್ಣ ಸುಳ್ಳು ಎಂದು ಆರೋಪಿಸಿದ್ದಾರೆ.
“ಕೋರ್ಟ್ ಆರ್ಡರ್ ಇದೆ ಅಂತಾ ಹೇಳ್ತಿದ್ದಾರೆ. ಆದರೆ ನಮಗೆ ಯಾರೂ ತೋರಿಸಿಲ್ಲ. ನಾವು ಊರಲ್ಲಿ ಇಲ್ಲದ ಸಮಯ ನೋಡಿ ಈ ಕೆಲಸ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಣದ ಬೇಡಿಕೆ ಇಟ್ಟುಕೊಂಡು ಒತ್ತಡ ಹಾಕಲಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ಪಿಡಿಓ ನಟರಾಜ್ ಅವರ ನೇರ ಕುಮ್ಮಕ್ಕಿನಿಂದಲೇ ಈ ಬೆಳವಣಿಗೆ ನಡೆದಿದೆ ಎಂದು ಪುಷ್ಪಾ ಆರೋಪಿಸಿದ್ದು, “ಯಶ್ ಸೈಟ್ ಒಡೆದಿದ್ದೀನಿ ಅಂತಾ ಹೀರೋ ಆಗೋಕೆ ನೋಡ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಪಕ್ಕದ ಸೈಟ್ ಮಾಲೀಕರು ಪೊಲೀಸರಾದರೂ ಅವರಿಗೆ ಕೂಡ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿರುವ ಅವರು, ಈ ಪ್ರಕರಣದಲ್ಲಿ ಅಧಿಕಾರ ದುರುಪಯೋಗ ನಡೆದಿದೆ ಎಂದು ಹೇಳಿದ್ದಾರೆ. “ನಾನು ಕಾನೂನು ಹೋರಾಟ ಮಾಡ್ತೀನಿ. ಇವರ ವಿರುದ್ಧ ಮಾನಹಾನಿ ಮೊಕದ್ದಮೆ ಹಾಕ್ತೀನಿ. ಎಲ್ಲಕ್ಕೂ ಉತ್ತರ ಕೊಡ್ಬೇಕು” ಎಂದು ಪುಷ್ಪಾ ಅರುಣ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.



