ಬೆಂಗಳೂರು: ಲೋಕಾಯುಕ್ತ ಮುಡಾ ಕೇಸ್ ಮುಚ್ಚಿ ಹಾಕುತ್ತಾರೆ ಎಂದು ಮೊದಲಿನಿಂದ ಹೇಳಿದ್ದೆವು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ. ಮುಡಾ ಹಗರಣ ಸಂಬಂಧ ತನಿಖೆ ನಡೆಸಿರುವ ಲೋಕಾಯುಕ್ತ ಕೊನೆಗೂ ವರದಿ ಸಿದ್ಧಪಡಿಸಿದ್ದು, ಸಿದ್ದರಾಮಯ್ಯ ಹಾಗೂ ಅವರ ಪತ್ನಿಗೆ ಕ್ಲೀನ್ಚಿಟ್ ನೀಡಿದ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಮೊದಲಿನಿಂದಲೂ ಸಿಬಿಐ ತನಿಖೆಗೆ ಆಗ್ರಹ ಮಾಡಿತ್ತು.
ಅಧಿಕಾರಿಗಳು ಯಾಕೆ ಅವರ ಕುಟುಂಬಕ್ಕೋಸ್ಕರ ಕೆಲಸ ಮಾಡಿದ್ದಾರೋ ಗೊತ್ತಿಲ್ಲ? ಪ್ರಕರಣವನ್ನು ಮುಚ್ಚಿ ಹಾಕಲು ಲೋಕಾಯುಕ್ತ ಅಧಿಕಾರಿಗಳು ಪ್ರಯತ್ನ ಮಾಡಿದ್ದಾರೆ ಎಂದರು.
ಇನ್ನೂ ಇಡಿ ಕೂಡ ತನಿಖೆ ನಡೆಸುತ್ತಿದೆ. ಸಾವಿರಕ್ಕೂ ಹೆಚ್ಚು ಸೈಟ್ ಗಳು ಮುಡಾಗೆ ವಾಪಸ್ ಬರಬೇಕು. ಈವರೆಗೂ ಲೋಕಾಯುಕ್ತ ಒಂದು ಸೈಟ್ ಕೂಡ ಮುಟ್ಟುಗೋಲು ಹಾಕಿಲ್ಲ. ಇಡಿ ಅವರು ಅಷ್ಟೊಂದು ಆಸ್ತಿ ಸೀಜ್ ಮಾಡಿದ್ದಾರೆ.
ಈ ಲೋಕಾಯುಕ್ತ ಯಾಕೆ ಸೀಜ್ ಮಾಡುತ್ತಿಲ್ಲ?. ಮೊದಲಿನಿಂದಲೂ ನಾವು ಲೋಕಾಯುಕ್ತ ಕೇಸ್ ಮುಚ್ಚಿ ಹಾಕುತ್ತಾರೆ ಅಂತಾ ಹೇಳಿದ್ದೆವು. ಹೀಗಾಗಿಯೇ ಸಿಬಿಐ ತನಿಖೆಗೆ ನಾವು ಮತ್ತು ಜೆಡಿಎಸ್ ಒತ್ತಾಯಿಸಿದ್ದೆವು ಎಂದರು.