ವಿಜಯಸಾಕ್ಷಿ ಸುದ್ದಿ, ಗದಗ: ತೋಂಟದಾರ್ಯ ಮಠದ ಎದುರಿನ ರಸ್ತೆ ಶ್ರೀಮಠದ ಒಡೆತನಕ್ಕೆ ಸೇರಿದ್ದಾಗಿದೆ ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನೆಲೆಯಲಿದೀ ಹಿಂದೆ ಕರೆನೀಡಿದ್ದ ಅನಿರ್ದಿಷ್ಟಾವಧಿ ಹೋರಾಟ ಮತ್ತು ಗದಗ ಬಂದ್ ಕೈಬಿಟ್ಟು, ಕಾನೂನು ಹೋರಾಟ ಆರಂಭಿಸುತ್ತೇವೆ ಎಂದು ಶ್ರೀರಾಮ ಸೇನೆ ಮುಖಂಡ ರಾಜು ಖಾನಪ್ಪನವರ ತಿಳಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಸೇನೆ, ಆಟೋ ಸೇನೆ ಹಾಗೂ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ಆಶ್ರಯದಲ್ಲಿ, ತೋಂಟದಾರ್ಯ ಮಠದ ಮುಂದಿನ ಸಾರ್ವಜನಿಕರ ರಸ್ತೆಯನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋರಾಟ ಕೈಗೊಳ್ಳಲಾಗಿತ್ತು. ಆದರೆ ಮೇ 13ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರಸಭೆ ಅಧಿಕಾರಿಗಳು, ಆ ರಸ್ತೆ ಶ್ರೀಮಠಕ್ಕೆ ಸೇರಿದೆ ಎಂದು ಸ್ಪಷ್ಟಪಡಿಸಿದ್ದರಿಂದ ನಮ್ಮ ಹೋರಾಟದಿಂದ ಹಿಂದೆ ಸರಿದಿದ್ದು, ಮೇ 15ರಂದು ಕರೆ ನೀಡಲಾಗಿದ್ದ ಬಂದ್ ಹಿಂಪಡೆದಿದ್ದೇವೆ ಎಂದು ತಿಳಿಸಿದರು.
ತೋಂಟದಾರ್ಯ ಮಠದ ಮುಂದಿನ ರಸ್ತೆ ದುರ್ಬಳಕೆ ಕುರಿತು 2016ರಿಂದಲೂ ಹೋರಾಟ ಮಾಡುತ್ತಿದ್ದೇವೆ. ಈ ಹಿಂದಿನ ನಗರಸಭೆ ಅಧಿಕಾರಿಗಳು, ಆ ರಸ್ತೆ ನಗರಸಭೆಗೆ ಸೇರಿದ್ದು ಎಂದು ದಾಖಲೆಗಳನ್ನು ಒದಗಿಸಿದ್ದಾರೆ. ಅಲ್ಲದೇ ಮಠದ ಮುಂದಿನ ರಸ್ತೆಯನ್ನೂ ನಗರಸಭೆಯಿಂದಲೇ ನಿರ್ಮಾಣ ಮಾಡಲಾಗಿದೆ ಎನ್ನುವ ದಾಖಲೆ ನೀಡಿದ್ದಾರೆ. ಆದರೆ ಈಗ ಏಕಾಏಕಿ ಶ್ರೀಮಠದ ಆಡಳಿತ ಮಂಡಳಿ, ಒಟ್ಟು 80 ಎಕರೆ ಜಾಗ ನಮ್ಮದು ಎನ್ನುತ್ತಿದ್ದಾರೆ. ಅದರ ಜೊತೆಗೆ ಅಧಿಕಾರಿಗಳು ಶ್ರೀಮಠದ ಪರವಾಗಿ ಧ್ವನಿ ಎತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಇನ್ನು ಮುಂದೆ ರಥಬೀದಿ ವಿಷಯವಾಗಿ ಜಿಲ್ಲಾಧಿಕಾರಿಗಳು ಮತ್ತು ಪೌರಾಯುಕ್ತರ ವಿರುದ್ಧ ಕಾನೂನು ಹೋರಾಟ ಆರಂಭಿಸಲಾಗುವುದು ಎಂದು ತಿಳಿಸಿದರು.
ಶ್ರೀಮಠದ ಮುಂದಿನ ರಥಬೀದಿ ಮಠದ ಆಸ್ತಿಯಾಗಿದ್ದರೆ ಅಲ್ಲಿ ಪ್ರತಿನಿತ್ಯ 15-20 ಜನ ಪೌರ ಕಾರ್ಮಿಕರು ಅಲ್ಲಿ ಕಸ ಗುಡಿಸುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದ ಅವರು, ಅಲ್ಲಿ ಟ್ರಾಫಿಕ್ ಪೊಲೀಸರ ನಿಯೋಜನೆ ಮಾಡಿದ್ದೇಕೆ, ಭದ್ರತೆ ಒದಗಿಸಲು ಶ್ರೀಮಠದವರು ಪೊಲೀಸರಿಗೆ ಶುಲ್ಕ ಭರಿಸಿದ್ದಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.
ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಸೋಮು ಗುಡಿ, ಕುಮಾರ ನಡಗೇರಿ, ಮೌನೇಶ ದಾಸರ, ವಿಶ್ವನಾಥ ಶೀರಿ, ಮಹೇಶ ರೋಖಡೆ, ಮಂಜು ಬಂಡಿವಡ್ಡರ, ಈರಣ್ಣ ಹೆಬಸೂರ, ಭರತ್ ಲದ್ದಿ, ವೆಂಕಟೇಶ ದೊಡ್ಡಮನಿ, ಸತೀಶ ಕುಂಬಾರ ಇತರರು ಉಪಸ್ಥಿತರಿದ್ದರು.
ಜಾತ್ರೆ ನೆಪದಲ್ಲಿ ಹೊರ ರಾಜ್ಯದವರು, ಅನ್ಯ ಭಾಷಿಕರು, ಮುಸ್ಲಿಂರು ಮಾತ್ರ ವ್ಯಾಪಾರ ನಡೆಸುತ್ತಿದ್ದರೂ ಕನ್ನಡಪರ ಹೋರಾಟಗಾರರು ಶ್ರೀಮಠದ ಪರವಾಗಿ ನಿಂತಿರುವುದು ಹಾಸ್ಯಾಸ್ಪದವಾಗಿದೆ. ಹಿಂದೂ ಕಾರ್ಯಕರ್ತರ ಶ್ರಮದ ಮೇಲೆ ಅಧಿಕಾರ ಅನುಭವಿಸುವ ಬಿಜೆಪಿ ನಾಯಕರೂ ಶ್ರೀಮಠದ ಪರವಾಗಿ ನಿಂತಿದ್ದಾರೆ. ಹೀಗಾಗಿ ನಿಜವಾದ ಸಮಾಜ ಘಾತುಕರು ಯಾರು ಎನ್ನುವುದನ್ನು ಸಮಾಜವೇ ನಿರ್ಧರಿಸಲಿದೆ ಎಂದು ರಾಜು ಖಾನಪ್ಪನವರ ಹೇಳಿದರು.