ವಿಜಯಸಾಕ್ಷಿ ಸುದ್ದಿ, ಗದಗ: ನೇಕಾರರ ಪತ್ತಿನ ಸಹಕಾರ ಸಂಘ ನಿ. ಗದಗ-ಬೆಟಗೇರಿ ಪ್ರಗತಿಯೊಂದಿಗೆ ಮುನ್ನಡೆದಿದ್ದು, 2024-25ನೇ ಸಾಲಿನಲ್ಲಿ 7 ಲಕ್ಷ 46 ಸಾವಿರಕ್ಕೂ ಹೆಚ್ಚು ಲಾಭ ಪಡೆದಿದೆ. ಶೇರುದಾರ ನೇಕಾರರಿಗೆ ಶೇ. 10ರಷ್ಟು ಡಿವ್ಹಿಡೆಂಡ್ ನೀಡಲಾಗುವದು ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಹೇಳಿದರು.
ಅವರು ಇತ್ತೀಚೆಗೆ ಬೆಟಗೇರಿಯ ಹೊಸ ಬನಶಂಕರಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಸಂಘದ 14ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2011ರಲ್ಲಿ ಸ್ಥಾಪನೆಯಾದ ಸಂಘವು ಕಳೆದ 14 ವರ್ಷಗಳಿಂದ ನೇಕಾರರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಶ್ರಮಿಸಿದೆ. ಆರಂಭದಲ್ಲಿ 380 ಸದಸ್ಯರನ್ನು ಹೊಂದಿದ್ದ ಸಂಘವು ಇದೀಗ 830 ಸದಸ್ಯರನ್ನು ಹೊಂದಿದೆ. ನೇಕಾರರಿಗೆ ಸಾಲ, ಜಾಮೀನು ಸಾಲ, ವಾಹನ ಸಾಲ ನೀಡಲಾಗಿದ್ದು, ಸಾಲ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವ ಮೂಲಕ ಸಂಘದ ಪ್ರಗತಿಗೆ ಎಲ್ಲ ನಿರ್ದೆಶಕರು ಕೈ ಜೋಡಿಸಿದ್ದಾರೆ ಎಂದರು.
ನೇಕಾರರು ಇದ್ದ ವ್ಯವಹಾರವನ್ನು ಅಭಿವೃದ್ಧಿಪಡಿಸಲು ಸಂಘವು ತನ್ನದೇ ಆದ ಇತಿಮಿತಿಯಲ್ಲಿ ಸಹಾಯ-ಸಹಕಾರ ನೀಡುವ ಮೂಲಕ ಸರಕಾರದ ಮೂಲಕ ಆಗಬೇಕಿರುವ ಸೌಲಭ್ಯಗಳಿಗಾಗಿ ಬೇಡಿಕೆಯ ಮನವಿ ಸಲ್ಲಿಸುತ್ತಾ ಬಂದಿದೆ ಎಂದರು.
ಸಂಘದ ಉಪಾಧ್ಯಕ್ಷ ವಿಜಯಕುಮಾರ ಕಬಾಡಿ ಮಾತನಾಡಿ, ನೇಕಾರರ ಕಲ್ಯಾಣಕ್ಕಾಗಿ ಹುಟ್ಟಿಕೊಂಡ ಈ ಸಂಘವು ಸದಾಕಾಲ ನೇಕಾರರ ಶ್ರೇಯಸ್ಸಿಗೆ ಶ್ರಮಿಸುತ್ತ ಬಂದಿದೆ. ಸಾಲ ಪಡೆದವರು ಸರಿಯಾಗಿ ಮರುಪಾವತಿ ಮಾಡಿ ಇನ್ನೊಬ್ಬ ನೇಕಾರರಿಗೆ ಅಗತ್ಯವಿದ್ದ ಸಾಲ ಪಡೆಯಲು ಪರೋಪಕ್ಷವಾಗಿ ಸಹಕಾರ ನೀಡಬೇಕು ಎಂದರು.
ಹಿರಿಯ ನಿರ್ದೇಶಕ ಅಮರೇಶ ಚಾಗಿ ಮಾತನಾಡಿ, ನಮ್ಮ ಸಹಕಾರಿ ಸಂಘಕ್ಕೆ ಸ್ವಂತ ಕಟ್ಟಡದ ಅವಶ್ಯಕತೆಯಿದ್ದು, ಮಧ್ಯವರ್ತಿ ಸ್ಥಳದಲ್ಲಿ ಜಾಗೆ-ಕಟ್ಟಡವನ್ನು ಗುರುತಿಸಲಾಗುತ್ತಿದೆ. ಬರಲಿರುವ ದಿನಗಳಲ್ಲಿ ಸ್ವಂತ ಕಟ್ಟಡದ ಉದ್ದೇಶವನ್ನು ಹೊಂದಲಾಗಿದೆ ಎಂದರಲ್ಲದೆ, ಈ ಸಲ ಲಾಭಾಂಶದಲ್ಲಿ ಶೇರುದಾರರಿಗೆ ಶೇ. 10 ಡಿವ್ಹಿಡೆಂಡ್ ನೀಡಲು ಸರ್ವ ನಿರ್ದೇಶಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ವೇದಿಕೆಯ ಮೇಲೆ ನಿರ್ದೇಶಕರಾದ ವಿಜಯಕುಮಾರ ಕಬಾಡಿ, ಅಮರೇಶ ಚಾಗಿ, ಅನಿಲ ಗಡ್ಡಿ, ನಾಮದೇವ ಸೊರೆ, ವಿಷ್ಣು ಪಾಸ್ತೆ, ಸುಭಾಸ ಗಂಜಿ, ವೀರಭದ್ರಪ್ಪ ಗಂಜಿ, ಮೋಹನಸಾ ರಾಯಬಾಗಿ, ಮುಖ್ಯ ಕಾರ್ಯನಿರ್ವಾಹಕ ಪ್ರಭು ನೀಲಗುಂದ ಉಪಸ್ಥಿತರಿದ್ದರು.
ನಿರ್ದೆಶಕ ಅನಿಲ ಗಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಅಸ್ತಿತ್ವ, ನಡೆದು ಬಂದ ದಾರಿಯ ಕುರಿತು ವಿವರಿಸಿದರು. ಸುಭಾಸ ಗಂಜಿ ಅಢಾವೆ ಪತ್ರಿಕೆ ಓದಿದರು. ಮುಖ್ಯ ಕಾರ್ಯ ನಿರ್ವಾಹಕ ಪ್ರಭು ನೀಲಗುಂದ ನಿರೂಪಿಸಿದರು. ವೀರೇಶ ಕುಂಬಾರ ವಂದಿಸಿದರು. ಸಮಾರಂಭದಲ್ಲಿ ಜವಳಿ ಉದ್ದಿಮೆದಾರರು, ನೇಕಾರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸಹಕಾರ ಸಂಸ್ಥೆಯೊಂದಿಗೆ ಉತ್ತಮ ವ್ಯವಹಾರ ಬಾಂಧವ್ಯ ಹೊಂದಿದ ಮೋಹನಸಾ ಬಸವಾ, ಗವಿಸಿದ್ದಪ್ಪ ಆನಂದ, ತಿಪ್ಪಣ್ಣ ನೀಲಗುಂದ, ನಾರಾಯಣಪ್ಪ ಗಂಜಿ, ಸಕ್ರಪ್ಪ ಐಲಿ, ಹನಮಂತಪ್ಪ ಶ್ಯಾವಿ, ವೆಂಕಟೇಶ ಭೀಮನಪಲ್ಲಿ, ಉಮೇಶ ಅಸುಂಡಿ, ಚಿನ್ನಪ್ಪ ಮುದಗಲ್ಲ, ಮಾರ್ಕಂಡೆಪ್ಪ ಮುದ್ದಾ, ಲಕ್ಷ್ಮಣ ಮಿಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.