ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಜನ ಸಮುದಾಯದಲ್ಲಿ ಸಂಸ್ಕೃತಿ, ಸೌಹಾರ್ದತೆ ಬೆಳೆಸುವುದೇ ದಸರಾ ಧರ್ಮ ಸಮ್ಮೇಳನದ ಮೂಲ ಗುರಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ರೋಣ ತಾಲೂಕಿನ ಅಬ್ಬಿಗೇರಿ ದಸರಾ ಮಹೋತ್ಸವದ ನಿಮಿತ್ತ ಆಗಮಿಸಿದ ಸಂದರ್ಭದಲ್ಲಿ ಶುಭಾಗಮನ ಸ್ವಾಗತ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಶ್ರೇಷ್ಠ ವ್ಯಕ್ತಿಗಳ ಜೊತೆಗೆ ಸಂಪರ್ಕ ಇದ್ದರೆ ಸಾಲದು. ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಶ್ರೇಷ್ಠ ಗ್ರಂಥಗಳನ್ನು ಖರೀದಿಸಿ ಇಟ್ಟರೆ ಸಾಲದು. ಅವುಗಳಲ್ಲಿರುವ ತತ್ವಗಳನ್ನು ಅನುಷ್ಠಾನಕ್ಕೆ ತರಬೇಕು. ವಿಶ್ವ ವಿದ್ಯಾಲಯಗಳಲ್ಲಿ ಸಿಗುವ ಪದವಿ ಮುಖ್ಯವಲ್ಲ. ಮನೆ-ಮನೆತನಗಳಲ್ಲಿ ಸಿಗುವ ಸಂಸ್ಕಾರವೂ ಮುಖ್ಯ. ಪದವಿ ಹೊಟ್ಟೆ ಪಾಡಿನ ದಾರಿ ತೋರಿದರೆ ಸಂಸ್ಕಾರ ಇಡೀ ಜೀವನದ ದಾರಿ ತೋರಿಸುತ್ತದೆ. ಉಸಿರು ನಿಂತರೆ ಮಾತ್ರ ಸಾವಲ್ಲ. ನಮ್ಮ ಧರ್ಮ ಸಂಸ್ಕೃತಿಗಳ ಮೇಲಾಗುತ್ತಿರುವ ನಿರಂತರ ದಬ್ಬಾಳಿಕೆಯನ್ನು ನೋಡಿಯೂ ಮೌನದಿಂದಿರುವುದು ಕೂಡಾ ಸಾವೇ ಎಂಬುದನ್ನು ಮರೆಯಬಾರದು ಎಂದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿ ನಿಂತು ಶ್ರಮಿಸಿದ ಮಹಾತ್ಮ ಗಾಂಧೀಜಿ ಹಾಗೂ ದಕ್ಷ, ಪ್ರಾಮಾಣಿಕ, ಜನಪರ ಕಾಳಜಿ ಉಳ್ಳ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಮಹೋತ್ಸವ ಒಂದೇ ದಿನ ಬಂದಿರುವುದು ಸಂತೋಷದ ಸಂಗತಿ. ಅವರ ಸರಳತೆ, ಸಾತ್ವಿಕ ಮನೋಭಾವವನ್ನು ಎಷ್ಟು ವರ್ಣಿಸಿದರೂ ಕಡಿಮೆ. ಬೆಳೆಯುವ ಯುವ ಜನಾಂಗದಲ್ಲಿ ಮತ್ತು ರಾಜಕೀಯ ಧುರೀಣರಲ್ಲಿ ಅವರ ಆದರ್ಶ ಗುಣಗಳು ಬೆಳೆದು ಬಂದರೆ ನಾಡು-ನುಡಿ ಶ್ರೀಮಂತಗೊಳ್ಳುವುದರಲ್ಲಿ ಸಂದೇಹ ಇಲ್ಲ. ಅಬ್ಬಿಗೇರಿ ಗ್ರಾಮಕ್ಕೆ ದಯಮಾಡಿಸಿದ ಸಂದರ್ಭದಲ್ಲಿ ಜಯಂತ್ಯುತ್ಸವದ ಈ ಮಂಗಳಮಯ ವೇದಿಕೆಯಲ್ಲಿ ಜರುಗುತ್ತಿರುವುದು ರಾಷ್ಟಾçಭಿಮಾನಿಗಳಿಗೆ ಸಂತೋಷವನ್ನು ಉಂಟು ಮಾಡಿದೆ. ಹತ್ತು ದಿನಗಳ ಕಾಲ ಜರುಗುವ ದಸರಾ ಧರ್ಮ ಸಮ್ಮೇಳನ ಈ ಹಿಂದಿನ ದಾಖಲೆಗಳನ್ನು ಮೀರಿ ಯಶಸ್ವಿಯಾಗಿ ಜರುಗುತ್ತದೆ ಎಂಬ ಆತ್ಮ ವಿಶ್ವಾಸವಿದೆ. ಲಿಂ. ಸೋಮಶೇಖರ ಶ್ರೀಗಳ ಸಂಕಲ್ಪವನ್ನು ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯರು, ಸಕಲ ಸದ್ಭಕ್ತರು ಸಾಕಾರಗೊಳಿಸುತ್ತಿರುವುದನ್ನು ಕಂಡು ಸಂತೋಷವಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ಸೂಡಿ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು. ಎಡೆಯೂರು ರೇಣುಕ ಶಿವಾಚಾರ್ಯರು ಉಪದೇಶಾಮೃತ ನೀಡಿದರು. ಸುಳ್ಳ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ನರೇಗಲ್ ಮಲ್ಲಿಕಾರ್ಜುನ ಶಿವಾಚಾರ್ಯರು, ಮಳಲಿ ಡಾ.ನಾಗಭೂಷಣ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯರು, ನಾಗವಂದ ಶಿವಯೋಗಿ ಶಿವಾಚಾರ್ಯರು, ದೋಟಿಹಾಳ ದೇವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಿದ್ಧರಬೆಟ್ಟ ವೀರಭದ್ರ ಶಿವಾಚಾರ್ಯರು ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ಪ್ರಾರ್ಥನೆ ಹಾಡಿದರು. ವೀರೇಶ ಕೂಗು ನಿರೂಪಿಸಿದರು.
ಭವ್ಯ ಸ್ವಾಗತ
ಸಮಾರಂಭಕ್ಕೂ ಮುನ್ನ ಅಬ್ಬಿಗೇರಿ ಗ್ರಾಮಕ್ಕೆ ಆಗಮಿಸಿದ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಪೂರ್ಣ ಕುಂಭ, ಕಲಶ ವಾದ್ಯ ವೈಭವದೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು. ಕೋಟುಮಚಗಿ ಕ್ರಾಸಿನಿಂದ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಎತ್ತುಗಳ ಜೊತೆಗೆ 108 ಟ್ರಾಕ್ಟರ್ಗಳೊಂದಿಗೆ ಸ್ವಾಗತಿಸಿದ ದೃಶ್ಯ ಅಪೂರ್ವವಾಗಿತ್ತು.
ಚಿನ್ನಕ್ಕಿಂತ ಅನ್ನಕ್ಕಿರುವ ಬೆಲೆ ಜಾಸ್ತಿ. ಏಕೆಂದರೆ ಚಿನ್ನವಿಲ್ಲದೇ ಬದುಕಬಹುದು. ಆದರೆ ಅನ್ನವಿಲ್ಲದೇ ಬದುಕಿ ಬಾಳಲಾಗದು. ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಸಂಸ್ಕೃತಿಯಲ್ಲಿ ಉತ್ಕೃಷ್ಟ ಮಾನವೀಯ ಮೌಲ್ಯಗಳನ್ನು ಬೋಧಿಸಿದ್ದಾರೆ. ಅವರು ತೋರಿದ ಧರ್ಮದ ಹೆದ್ದಾರಿಯಲ್ಲಿ ನಡೆದರೆ ಬದುಕು ಸಾರ್ಥಕಗೊಳ್ಳುವುದು.
– ಡಾ. ವೀರಸೋಮೇಶ್ವರ ಜಗದ್ಗುರುಗಳು.
ಶ್ರೀ ರಂಭಾಪುರಿ ಪೀಠ, ಬಾಳೆಹೊನ್ನೂರು.