ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಅರುಣೋದಯ ವಿಶೇಷ ಮಕ್ಕಳ ಶಾಲೆಯ ಶೈಕ್ಷಣಿಕ ವರ್ಷಾರಂಭಕ್ಕೆ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ಕೊಟ್ಟು, ಸಿಹಿ ವಿತರಿಸುವ ಮೂಲಕ ಸೋಮವಾರ ಬರಮಾಡಿಕೊಳ್ಳಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗಾಯತ್ರಿ ಕೃಷ್ಣರಾಜ ಹೆಬಸೂರ ವಿಶೇಷ ಮಕ್ಕಳಿಗೆ ಆರತಿ ಮಾಡಿ ಶಾಲೆಗೆ ಬರಮಾಡಿಕೊಂಡರು. ವಿಶೇಷ ಚೇತನ ಮಕ್ಕಳು ವಿಶೇಷವಾಗಿದ್ದು, ಅವರನ್ನು ಪ್ರೀತಿ-ಸ್ನೇಹದಿಂದ ನೋಡಿಕೊಳ್ಳುವ ಕಾರ್ಯ ಪಾಲಕರಿಂದ, ಶಿಕ್ಷಕ ಬಳಗದಿಂದ ಆಗಬೇಕು. ವಿಶೇಷ ಮಕ್ಕಳ ಬುದ್ಧಿಮಟ್ಟಕ್ಕೆ ಅನುಗುಣವಾಗಿ ಶಿಕ್ಷಣ ನೀಡಿದಲ್ಲಿ ಅವರು ತಮ್ಮ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಬರಲಿರುವ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದಲ್ಲಿ ಅವರಿಗೆ ಸರಕಾರದಿಂದ ಸಾಕಷ್ಟು ಸೌಲಭ್ಯಗಳಿವೆ ಎಂದರು.
ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಲುಕ್ಕಣಸಾ ರಾಜೋಳಿ ಮಾತನಾಡಿ, ಹುಬ್ಬಳ್ಳಿಯ ಸೇವಾ ಟ್ರಸ್ಟ್ನ ಅರುಣೋದಯ ವಿಶೇಷ ಮಕ್ಕಳ ಶಾಲೆಯು ಬಹು ವರ್ಷಗಳಿಂದ ವಿಶೇಷ ಮಕ್ಕಳ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡಿದೆ. ಇಲ್ಲಿ ವ್ಯಾಸಂಗ ಮಾಡಿದ ಹಳೇ ವಿದ್ಯಾರ್ಥಿಗಳು ಇಂದು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿದ್ದಾರೆ ಎಂದರು.
ಕಾರ್ಯದರ್ಶಿ ಜಯರಾಜ ಮುಳಗುಂದ ಮಾತನಾಡಿ, ವಿಶೇಷ ಮಕ್ಕಳ ಶ್ರೇಯೋಭಿವೃದ್ಧಿಗೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅನುಭವಿಕ ಶಿಕ್ಷಕ ಬಳಗ ಮಕ್ಕಳ ಬಗ್ಗೆ ಕಾಳಜಿ ವಹಿಸುವರು ಎಂದರು.
ಶಾಲಾ ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ ಸ್ವಾಗತಿಸಿದರು, ಸದಸ್ಯರಾದ ಬಸವರಾಜ ಪಟ್ಟಣಶೆಟ್ಟಿ ನಿರೂಪಿಸಿದರು. ಕಟ್ಟಡ ನಿರ್ವಾಹಕ ಮಲ್ಲಿಕಾರ್ಜುನ ನಾಗಲಾಪೂರ ವಂದಿಸಿದರು.