ವಿಜಯಸಾಕ್ಷಿ ಸುದ್ದಿ, ಗದಗ: ಚಾತುರ್ಮಾಸದ ಪ್ರಯುಕ್ತ ಗದಗ ನಗರದಲ್ಲಿ ನಾಲ್ಕು ತಿಂಗಳ ಕಾಲ ಜೈನ ಸಮಾಜ ಬಾಂಧವರಿಗೆ ಧರ್ಮ ಜಾಗೃತಿ, ಧರ್ಮೋಪದೇಶ ನೀಡಲು ಆಗಮಿಸಿರುವ ಜೈನ್ ಸಮಾಜ ಹಿರಿಯ ಆಚಾರ್ಯರಾದ ಆಚಾರ್ಯ ಪೂಜ್ಯ ಶ್ರೀ ವಿಮಲಸಾಗರ ಸುರಜೀ ಹಾಗೂ ಐವರು ಜೈನ್ ಯುವ ಮುನಿಗಳನ್ನು ಸೋಮವಾರ ಮುಂಜಾನೆ ಗದುಗಿನ ಸಮಸ್ತ ಜೈನ್ ಸಮಾಜಬಾಂಧವರು ಬೃಹತ್ ಮೆರವಣಿಗೆ ಮೂಲಕ ಬರಮಾಡಿಕೊಂಡರು.
ಗದುಗಿನ ಲಾಲಿದೇವಿ ರೂಪಚಂದ ಬಾಫಣಾ (ಪಂಕಜ್ ಆರ್.ಬಾಫಣಾ) ಅವರ ನಿವಾಸದಿಂದ ನಗರದ ಶ್ರೀ ಪಾರ್ಶ್ವನಾಥ ಜೈನ್ ಮೂರ್ತಿ ಪೂಜಕ ಸಂಘ ಹಾಗೂ ಸಮಸ್ತ ಜೈನ್ ಸಮಾಜಬಾಂಧವರು ಶೃದ್ಧಾಭಕ್ತಿಯೊಂದಿಗೆ ನಗರದ ಸ್ಟೇಷನ್ ರೋಡ್ನ ಪಾರ್ಶ್ವನಾಥ ಜೈನ್ ದೇವಸ್ಥಾನಕ್ಕೆ ಬರಮಾಡಿಕೊಂಡರು. ಪಾರ್ಶ್ವನಾಥ ಜೈನ್ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ಅಲಂಕೃತ ಬೃಹತ್ ವೇದಿಕೆಯಲ್ಲಿ ವಿರಾಜಮಾನರಾದ ಆಚಾರ್ಯ ಪೂಜ್ಯ ಶ್ರೀ ವಿಮಲಸಾಗರ ಸುರಜೀ ಅವರು ಸಮಸ್ತ ಜೈನ ಸಮಾಜಬಾಂಧವರಿಗೆ ದರ್ಶನಾಶೀರ್ವಾದ ನೀಡಿದರು.
ಜು. 8ರಿಂದ ನಾಲ್ಕು ತಿಂಗಳವರೆಗೆ ಗದುಗಿನ ಪಾರ್ಶ್ವನಾಥ ಜೈನ್ದಲ್ಲಿ ಚಾತುರ್ಮಾಸದ ಪ್ರಯುಕ್ತ ನಿತ್ಯ ಮುಂಜಾನೆ 8.45 ಗಂಟೆಯಿಂದ 10 ಗಂಟೆಯವರೆಗೆ ಧರ್ಮೋಪದೇಶ ಮಾಡುವರು.
ಸಮಸ್ತ ಜೈನ್ ಸಮಾಜಬಾಂಧವರು ಸೇರಿದಂತೆ ಶ್ರೀ ಪಾರ್ಶ್ವನಾಥ ಜೈನ್ ಮೂರ್ತಿ ಪೂಜಕ ಸಂಘದ ಅಧ್ಯಕ್ಷ ಪಂಕಜ್ ರೂಪಚಂದ ಬಾಫಣಾ, ಕಾರ್ಯದರ್ಶಿ ಹರೀಶ್ ಶಹಾ ಸೇರಿದಂತೆ ಪದಾಧಿಕಾರಿಗಳು, ಟ್ರಸ್ಟ್ ಕಮಿಟಿ ಚೇರಮನ್ ದಲಿಚಂದ ಕವಾಡ, ಖಜಾಂಚಿ ಜೀತೇಂದ್ರ ಶಹಾ, ಟ್ರಸ್ಟಿ ಜವಾಹರಲಾಲ ಬಂದಾ, ನಿರ್ಭಯಲಾಲ ಹುಂಡಿಯಾ, ಗೌತಮ್ಚಂದ ಕವಾಡ ಮುಂತಾದವರಿದ್ದರು.
ಗನಿವರ್ಯ ಶ್ರೀ ಪದ್ಮಾವಿಮಲ್ ಸಾಗರಜೀ ಮಾರಾಸಾಹೇಬ, ಮುನಿಶ್ರೀ ನಿಗ್ರಹಗ್ರಾನಾಥಾ ವಿಮಲ ಸಾಗರರಜೀ ಮಾರಾಸಾಹೇಬ, ಮುನಿಶ್ರೀ ತತ್ವವಿಮಲ ಸಾಗರಜೀ ಮಾರಾಸಾಹೇಬ, ಮುನಿಶ್ರೀ ತೀರ್ಥವಿಮಲ ಸಾಗರಜೀ ಮಾರಾಸಾಹೇಬ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಚಾತುರ್ಮಾಸದ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ಸಮಾಜದ ಗಣ್ಯರು, ದಾನಿಗಳು ದಂಪತಿ ಸಮೇತರಾಗಿ ಜ್ಯೋತಿ ಬೆಳಗಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.