ವಿಜಯಸಾಕ್ಷಿ ಸುದ್ದಿ, ಗದಗ : ಗ್ರಾಮ ಪಂಚಾಯತ್ ಒಕ್ಕೂಟದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗದಗ ನಗರದ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದು, ಪ್ರತಿಭಟನೆಯ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ, ಕೆಲಕಾಲ ಹೋರಾಟದಲ್ಲಿ ಭಾಗಿಯಾದರು.
ಪಿಡಿಒಗಳಿಗೆ ನೈತಿಕ ಸ್ಥೈರ್ಯ ತುಂಬಿದ ವಿಜಯೇಂದ್ರ, ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿ, ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಇಲ್ಲಿಗೆ ಬಂದಿಲ್ಲ, ನಾನು ಶಾಸಕನಾಗಿ ಬಂದ್ದೇನೆ. ನಿಮ್ಮ ಧ್ವನಿಯಾಗಲು ಬಂದಿದ್ದೇನೆ.
ರಾಜ್ಯ ಸರ್ಕಾರದ ದುರಹಂಕಾರದ ವರ್ತನೆಯನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ನಿಮ್ಮ ಬೆಂಗಳೂರಿನಲ್ಲಿ ಯಾವುದೇ ಸಚಿವರು ಬಂದು ಮನವಿ ಸ್ವೀಕಾರ ಮಾಡಿಲ್ಲ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಿಮ್ಮ ಇಲಾಖೆ ಸಚಿವರಿಗೆ ಬೇರೆ ಬೇರೆ ಇಲಾಖೆಯಲ್ಲಿ ಮೂಗು ತೂರಿಸಲು ಸಮಯವಿದೆ, ಇಡೀ ಜಗತ್ತಿನ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ ಇಲಾಖೆಯಲ್ಲಿ ಇಷ್ಟೊಂದು ದೊಡ್ಡ ಸಮಸ್ಯೆ ಇದ್ದರೂ, ಅವರ ಇಲಾಖೆಯ ಸಮಸ್ಯೆಯ ಮಾಹಿತಿ ಪಡೆದು ಬಗೆಹರಿಸುವ ಸೌಜನ್ಯ ತೋರಿಸಿಲ್ಲ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಸಿ. ಪಾಟೀಲ, ರೋಣ ಮಾಜಿ ಶಾಸಕ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಸೇರಿದಂತೆ ಪಕ್ಷದ ಮುಖಂಡರು ಇದ್ದರು.