ಬೆಂಗಳೂರು: ಗೃಹಲಕ್ಷ್ಮಿ ಹಣ ಬಿಡುಗಡೆಗೆ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಹಣ ಬಿಡುಗಡೆಗೆ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ. ಏಪ್ರಿಲ್ ತಿಂಗಳವರೆಗೂ ಹಣ ಕ್ಲಿಯರ್ ಆಗಿದೆ. ಮೇ ತಿಂಗಳು ಮಾತ್ರ ಬಾಕಿ ಇದ್ದು ಪ್ರತಿ ತಿಂಗಳು ಹಣಕಾಸು ಇಲಾಖೆಗೆ ಹಣ ಬಿಡುಗಡೆ ಆಗುತ್ತಿದೆ ಎಂದರು.
ಈಗ ಹಣ ತಾಲೂಕು, ಜಿಲ್ಲಾ ಪಂಚಾಯತಿಗೆ ಸುತ್ತಾಡಿ ಬಿಡುಗಡೆ ಆಗಬೇಕಿದೆ. ಇದರಿಂದಾಗಿ ಒಂದು ವಾರ, ಎರಡು ವಾರ ತಡೆ ಆಗಬಹುದು ಅಷ್ಟೇ. ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
ಹಣಕಾಸು ಇಲಾಖೆ ಪ್ರತಿ ತಿಂಗಳು ಹಣ ನೀಡುತ್ತಿದೆ. ಪ್ರತಿ ತಿಂಗಳು ಯಜಮಾನಿಯರು ಹೊಸದಾಗಿ ಸೇರುತ್ತಿದ್ದಾರೆ. ಈಗ 1.25 ಕೋಟಿ ಯಜಮಾನಿಯರು ಯೋಜನೆ ಅಡಿ ಇದ್ದಾರೆ. ನಮ್ಮ ಇಲಾಖೆಯಿಂದ ಫಲಾನುಭವಿಗಳ ಪರಿಷ್ಕರಣೆ ಮಾಡುವುದಿಲ್ಲ. ಈಗ ಹೇಗೆ ಇದೆಯೋ ಹಾಗೆಯೇ ಮುಂದುವರೆಯುತ್ತಿದೆ ಅಂತ ಸ್ಪಷ್ಟಪಡಿಸಿದರು.