ವಿಜಯಸಾಕ್ಷಿ ಸುದ್ದಿ, ಗದಗ: ನೂರು ವರ್ಷ ಪೂರೈಸಿರುವ ಆರ್ಎಸ್ಎಸ್ ಸಂಘಟನೆ ಇನ್ನೂ ನೋಂದಾಯಿಸಿ ಆಗಿಲ್ಲ. ಆರ್ಎಸ್ಎಸ್ ಪ್ರಮುಖರು ದೇಶ ಮತ್ತು ಕಾನೂನಿಗಿಂತ ದೊಡ್ಡವರು ಎನ್ನುವ ಮನೋಭಾವ ಹೊಂದಿದ್ದಾರೆ. ಶತಮಾನ ಕಂಡ ಸಂಘಟನೆಯ ಹಣಕಾಸಿನ ಮೂಲದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಮಾಹಿತಿ ಇಲ್ಲ ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಆರೋಪಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದ ತನ್ನ ಕಾರ್ಯಾಲಯದ ಮೇಲೆ ಭಾರತದ ದ್ವಜ ಹಾರಿಸಿಲ್ಲ. 100 ವರ್ಷದ ಅವಧಿಯ ಪಥಸಂಚಲನ ಮಾಡುವ ಸಂದರ್ಭದಲ್ಲಿಯೂ ಒಂದೇ ಒಂದು ತ್ರಿವರ್ಣ ಧ್ವಜ ಪ್ರದರ್ಶನ ಮಾಡಿಲ್ಲ ಎಂದು ಆಪಾದಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ಸಿದ್ದರಾಮಯ್ಯನವರಿಗೆ ಬರೆದ ಪತ್ರದಲ್ಲಿ ಆರ್ಎಸ್ಎಸ್ ನಿಷೇಧ ಮಾಡಬೇಕು ಎಂದಿಲ್ಲ. ಸರ್ಕಾರಿ ಜಾಗದಲ್ಲಿ ಸಂಘದ ಚಟುವಟಿಕೆ ಮಾಡಬಾರದು ಎಂದು ಹೇಳಿದ್ದಾರೆ. ಆದರೆ, ಅವರ ಮೇಲೆ ವೈಯಕ್ತಿಕ ದಾಳಿ ಹಾಗೂ ನಿಂದನೆ ಮಾಡಲಾಗುತ್ತಿದೆ. ಇದು ಸಂವಿಧಾನ ವಿರೋಧಿ ನಡೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಎಲ್ಲ ಧಾರ್ಮಿಕ ಸಂಘಟನೆಗಳು ಸರ್ಕಾರದ ಜಾಗವನ್ನು ಬಳಕೆ ಮಾಡಿಕೊಳ್ಳದಂತೆ ನಿರ್ಬಂಧ ಹೇರಲಾಗಿದೆ. ಅಂತೆಯೇ ಕರ್ನಾಟಕದಲ್ಲಿಯೂ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಅಶೋಕ ಬರಗುಂಡಿ ಮಾತನಾಡಿ, ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಮತೀಯ ಭಾವನೆ ಬೆಳೆಸುವ ಸಂಸ್ಥೆಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಕೆ. ಪೂಜಾರ, ಬಾಲರಾಜ ಅರಬರ, ಯಲ್ಲಪ್ಪ ರಾಮಗೇರಿ, ಪರಸು ಕಾಳೆ, ಅನಿಲ ಕಾಳೆ, ಬಸವರಾಜ ಬಿಳೆಯಲಿ, ಮುತ್ತು ಬಿಳೆಯಲಿ ಇತರರು ಉಪಸ್ಥಿತರಿದ್ದರು.



