ವಿಜಯಸಾಕ್ಷಿ ಸುದ್ದಿ, ಜತ್: ಮನುಷ್ಯನಿಗೆ ಬರುವ ಸಿರಿ-ಸಂಪತ್ತು ಶಾಶ್ವತವಲ್ಲ. ಆಧ್ಯಾತ್ಮ ಜ್ಞಾನವೊಂದೇ ನಿಜವಾದ ಸಂಪತ್ತು. ಸಿರಿ ಬಂದಾಗ ದೇವರು ಮತ್ತು ಧರ್ಮವನ್ನು ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ತಾಲೂಕಿನ ಸುಸಲಾದಿ ಗ್ರಾಮದಲ್ಲಿ ನಿರ್ಮಿಸಿದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಉದ್ಘಾಟನೆ, ಲಿಂಗ ಪ್ರತಿಷ್ಠಾಪನೆ ಮತ್ತು ಕಳಸಾರೋಹಣದ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ದೇವರು ಕೊಟ್ಟ ಕೊಡುಗೆ ಬೇರಾರೂ ಕೊಡಲು ಸಾಧ್ಯವಿಲ್ಲ. ನಿಂತ ನೆಲ, ಕುಡಿಯುವ ನೀರು, ಬೀಸುವ ಗಾಳಿ ದೇವರು ಕೊಟ್ಟ ಅಮೂಲ್ಯ ವರ. ಉದಾತ್ತ ಮಾನವ ಜೀವನದಲ್ಲಿ ಒಂದಿಷ್ಟಾದರೂ ಶಿವಜ್ಞಾನ ಸಂಪಾದಿಸಿಕೊಳ್ಳದಿದ್ದರೆ ಮತ್ತು ಗುರು ಕಾರುಣ್ಯ ಪಡೆಯದೇ ಹೋದರೆ ಜೀವನ ವ್ಯರ್ಥವಾಗುತ್ತದೆ. ದೇವರ ಮೇಲಿನ ನಂಬಿಗೆ ಮತ್ತು ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳಬಾರದು. ಜೀವನದ ವಿಕಾಸಕ್ಕೆ ತಂದ ನೀತಿ-ನಿಯತ್ತುಗಳ ಪರಿಪಾಲನೆಯೇ ನಿಜವಾದ ಧರ್ಮ.
ಮಾನವ ಜೀವನದ ಶ್ರೇಯಸ್ಸಿಗಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು ದಶವಿಧ ಸೂತ್ರಗಳನ್ನು ಬೋಧಿಸಿದ್ದಾರೆ. ಶರಣರು ಸಪ್ತ ಸೂತ್ರಗಳನ್ನು ಹೇಳಿದ್ದಾರೆ. ದೇವರು ಮತ್ತು ಧರ್ಮವನ್ನು ತೋರಿಸುವಾತನೇ ನಿಜವಾದ ಗುರು. ಪರಶಿವನ ಸಾಕಾರ ಇನ್ನೊಂದು ರೂಪವೇ ಗುರು. ಅಜ್ಞಾನ ಕಳೆದು ಜ್ಞಾನ ಜ್ಯೋತಿ ಬೆಳಗಿಸುವ ಶಕ್ತಿ ಶ್ರೀ ಗುರುವಿಗೆ ಇದೆ. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸುಂದರವಾಗಿ ಕಟ್ಟಿ ಇಂದು ಉದ್ಘಾಟನೆ ಲಿಂಗ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧರ್ಮ ದೀಪೋತ್ಸವ ಸಂಯೋಜಿಸಿರುವುದು ತಮಗೆ ಅತ್ಯಂತ ಸಂತೋಷವನ್ನು ಉಂಟುಮಾಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಜಯ ಮತ್ತು ಚನ್ನಪ್ಪ ಮಾತನಾಡಿ, ವೀರಶೈವ ಧರ್ಮ ಮತ್ತು ಗುರು ಪರಂಪರೆ ಎಂದಿಗೂ ಮರೆಯಬಾರದೆಂದರು. ತಡವಲಗಾ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಜಗಜೇವಣಿ ಮುಪ್ಪಿನಾರ್ಯ ಶಿವಾಚಾರ್ಯರು, ಹಾಗೂ ಗುಡ್ಡಾಪುರದ ಗುರಪಾದೇಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು. ಶಾಸಕ ಗೋಪಿಚಂದ ಪಡೋಳಕರ, ಡಾ. ರವೀಂದ್ರ ಅರಳಿ, ಎಮ್.ಆರ್. ಪಾಟೀಲ, ಚನ್ನಪ್ಪಾ ಹೊರ್ತಿಕರ, ಉಮದಿ ಬಸವರಾಜ ಹಿರೇಮಠ ಅವರನ್ನು ಮೊದಲ್ಗೊಂಡು ಹಲವಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.
ಸಮಾರಂಭದ ಹಿಂದಿನ ದಿನ ಸಂಜೆ ಸುಸಲಾದಿ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಸಂಭ್ರಮದ ಅಡ್ಡಪಲ್ಲಕ್ಕಿ ಮಹೋತ್ಸವ ಭಕ್ತ ಸಮುದಾಯದ ಮಧ್ಯೆ ವಿಜೃಂಭಣೆಯಿಂದ ಜರುಗಿತು. ದೇವಸ್ಥಾನ ಉದ್ಘಾಟನೆ ನಿಮಿತ್ತ 5 ದಿನಗಳ ಕಾಲ ಜೇರಟಗಿಯ ವೇ. ಮಡಿವಾಳೇಶ್ವರ ಶಾಸ್ತಿçಗಳಿಂದ ಆಧ್ಯಾತ್ಮಿಕ ಪ್ರವಚನ ಜರುಗಿತು.
ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಮನುಷ್ಯ ಯಂತ್ರದಂತೆ ದುಡಿದರೂ ಮನಸ್ಸಿಗೆ ಶಾಂತಿಯಿಲ್ಲ. ಬೆಳೆಯುವ ಮಕ್ಕಳಿಗೆ ಭೌತಿಕ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವ ಕೆಲಸ ಮಾಡಬೇಕಾಗಿದೆ. ಸುಸಲಾದಿ ಗ್ರಾಮದ ಬಹು ದಿನಗಳ ಸಂಕಲ್ಪ ಶ್ರೀ ರಂಭಾಪುರಿ ಜಗದ್ಗುರುಗಳ ಶುಭಾಗಮನದೊಂದಿಗೆ ಪೂರ್ಣಗೊಂಡಿದೆ. ಆಗಾಗ ಇಂಥ ಧರ್ಮ ಕಾರ್ಯಗಳು ನಡೆದುಕೊಂಡು ಬರಬೇಕೆಂದರು.