HomeIndia Newsವಿಮಾನ ದುರಂತಗಳಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ರಾಜಕಾರಣಿಗಳು ಯಾರ್ಯಾರು..?

ವಿಮಾನ ದುರಂತಗಳಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ರಾಜಕಾರಣಿಗಳು ಯಾರ್ಯಾರು..?

For Dai;y Updates Join Our whatsapp Group

Spread the love

ಬಾರಾಮತಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು, ವಿಮಾನದಲ್ಲಿದ್ದ ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ. ಬಾರಾಮತಿ ಪ್ರದೇಶದಲ್ಲಿ ಲ್ಯಾಂಡಿಂಗ್ ವೇಳೆ ಸಂಭವಿಸಿದ ಈ ದುರಂತ, ಅವರು ಗೆದ್ದಿದ್ದ ಕ್ಷೇತ್ರದಲ್ಲೇ ಅವರ ರಾಜಕೀಯ ಪಯಣಕ್ಕೆ ತೆರೆ ಎಳೆದಂತಾಗಿದೆ.

ಈ ದುರ್ಘಟನೆಯ ಬಳಿಕ, ಭಾರತದಲ್ಲಿ ಹಿಂದೆ ವಿಮಾನ ಹಾಗೂ ಹೆಲಿಕಾಪ್ಟರ್ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ರಾಜಕಾರಣಿಗಳ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ. ಇಲ್ಲಿದೆ ಅಂತಹ ಪ್ರಮುಖ ಪ್ರಕರಣಗಳ ಸಂಕ್ಷಿಪ್ತ ಮಾಹಿತಿ:

ವಿಜಯ್ ರೂಪಾನಿ (2025)
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಜೂನ್ 12, 2025ರಂದು ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ನಿಧನರಾದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದ್ದು, ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಸಾವನ್ನಪ್ಪಿದ್ದರು.

ದೋರ್ಜಿ ಖಂಡು (2011)
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಅವರು ಏಪ್ರಿಲ್ 30, 2011ರಂದು ತವಾಂಗ್‌ನಿಂದ ಇಟಾನಗರಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ಪರಿಣಾಮ ಇತರ ನಾಲ್ವರು ಜೊತೆ ಪ್ರಾಣ ಕಳೆದುಕೊಂಡರು.

ವೈ.ಎಸ್. ರಾಜಶೇಖರ ರೆಡ್ಡಿ (2009)
ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿ ವೈ.ಎಸ್.ಆರ್ ಎಂದೇ ಪ್ರಸಿದ್ಧರಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿ ಅವರು ಸೆಪ್ಟೆಂಬರ್ 2, 2009ರಂದು ಬೆಲ್ 430 ಹೆಲಿಕಾಪ್ಟರ್ ದಟ್ಟ ನಲ್ಲಮಲ ಅರಣ್ಯದಲ್ಲಿ ಅಪಘಾತಕ್ಕೀಡಾಗಿ ನಿಧನರಾದರು. ಕೆಟ್ಟ ಹವಾಮಾನ ಈ ಅಪಘಾತಕ್ಕೆ ಕಾರಣವಾಗಿತ್ತು.

ಓ.ಪಿ. ಜಿಂದಾಲ್ ಮತ್ತು ಸುರೇಂದರ್ ಸಿಂಗ್ (2005)
ಕೈಗಾರಿಕೋದ್ಯಮಿ ಹಾಗೂ ಹರಿಯಾಣ ಸಚಿವ ಓಂ ಪ್ರಕಾಶ್ ಜಿಂದಾಲ್ ಮತ್ತು ಕೃಷಿ ಸಚಿವ ಸುರೇಂದರ್ ಸಿಂಗ್ ಅವರು 2005ರಲ್ಲಿ ದೆಹಲಿಯಿಂದ ಚಂಡೀಗಢಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಅಪಘಾತಕ್ಕೀಡಾದ ಪರಿಣಾಮ ಸಾವನ್ನಪ್ಪಿದರು.

ಕೆ.ಎಸ್. ಸೌಮ್ಯ (ಸೌಂದರ್ಯ) (2004)
ಖ್ಯಾತ ದಕ್ಷಿಣ ಭಾರತೀಯ ನಟಿ ಸೌಂದರ್ಯ ಅವರು ಏಪ್ರಿಲ್ 17, 2004ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ಅವರು ಬೆಂಗಳೂರಿನಿಂದ ಕರೀಂನಗರಕ್ಕೆ ತಮ್ಮ ಸಹೋದರರೊಂದಿಗೆ ಪ್ರಯಾಣಿಸುತ್ತಿದ್ದರು.

ಸಿಪ್ರಿಯನ್ ಸಂಗ್ಮಾ (2004)
ಮೇಘಾಲಯದ ಗ್ರಾಮೀಣಾಭಿವೃದ್ಧಿ ಸಚಿವ ಸಿಪ್ರಿಯನ್ ಸಂಗ್ಮಾ ಅವರು ಸೆಪ್ಟೆಂಬರ್ 22, 2004ರಂದು ಗುವಾಹಟಿಯಿಂದ ಶಿಲ್ಲಾಂಗ್‌ಗೆ ತೆರಳುತ್ತಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ ಬಾರಾಪಾನಿ ಸರೋವರದ ಬಳಿ ಅಪಘಾತಕ್ಕೀಡಾದ ಪರಿಣಾಮ ಇತರ ಒಂಬತ್ತು ಮಂದಿಯೊಂದಿಗೆ ಸಾವನ್ನಪ್ಪಿದರು.

ಜಿ.ಎಂ.ಸಿ. ಬಾಲಯೋಗಿ (2002)
ಲೋಕಸಭಾ ಸ್ಪೀಕರ್ ಹಾಗೂ ತೆಲುಗು ದೇಶಂ ಪಕ್ಷದ ನಾಯಕ ಜಿಎಂಸಿ ಬಾಲಯೋಗಿ ಅವರು ಮಾರ್ಚ್ 3, 2002ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕೈಕಲೂರು ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.

ಮಾಧವರಾವ್ ಸಿಂಧಿಯಾ (2001)
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ನಾಗರಿಕ ವಿಮಾನಯಾನ ಸಚಿವ ಮಾಧವರಾವ್ ಸಿಂಧಿಯಾ ಅವರು ಸೆಪ್ಟೆಂಬರ್ 30, 2001ರಂದು ಉತ್ತರ ಪ್ರದೇಶದ ಮಣಿಪುರಿ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನಿಧನರಾದರು.

ಸಂಜಯ್ ಗಾಂಧಿ (1980)
ಕಾಂಗ್ರೆಸ್ ನಾಯಕ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ ಅವರು ಜೂನ್ 23, 1980ರಂದು ದೆಹಲಿಯ ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ ವಿಮಾನ ನಿಯಂತ್ರಣ ತಪ್ಪಿ ಪತನಗೊಂಡ ಪರಿಣಾಮ ಸಾವನ್ನಪ್ಪಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!