ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂತಿಟ್ಟಿದ್ದಾರೆ ಅನ್ನೂ ಆರೋಪ ಇದೀಗ ಎಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದು ಕೇವಲ ಆರೋಪವಾಗಿ ಉಳಿದಿಲ್ಲ, ಚಿನ್ನಯ ತೋರಿಸಿದ ಬುರಡೆ ಪ್ರಕರಣಕ್ಕೆ ದೊಡ್ಡ ತಿರುವು ಕೊಟ್ಟಿದೆ. ಇದೀಗ ಬುರುಡೆ ಮತ್ತು ಮೂಳೆಗಳ ಗುರುತು ಕುರಿತು ಪತ್ತೆ ಸಂಬಂಧ ತನಿಖೆ ಮುಂದುವರಿದಿದೆ.
ಈ ಹಿಂದೆ, ಮಹಿಳೆಯರು ಮತ್ತು ಯುವತಿಯರ ಶವಗಳನ್ನು ಹೂತುಹಾಕಲಾಗಿದೆ ಎಂಬ ಆರೋಪವಿತ್ತು. ಆದರೆ, ವಿಶೇಷ ತನಿಖಾ ದಳ (ಎಸ್ಐಟಿ) ಬೆಳ್ತಂಗಡಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಒಂದು ಬುರುಡೆ, ಸ್ಪಾಟ್ ನಂಬರ್ 6ರಲ್ಲಿ ದೊರೆತ ಇನ್ನೊಂದು ಮತ್ತು ಸ್ಪಾಟ್ ನಂಬರ್ 15ರ ಬಳಿ ಪತ್ತೆಯಾದ ಮೂರನೇ ಬುರುಡೆ ಸೇರಿದಂತೆ ಒಟ್ಟು ಮೂರು ಬುರುಡೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗಿತ್ತು.
ಎಫ್ಎಸ್ಎಲ್ ವರದಿಯು ಈ ಮೂರು ಬುರುಡೆಗಳು ಪುರುಷರಿಗೆ ಸೇರಿವೆ ಎಂಬುದನ್ನು ದೃಢಪಡಿಸಿದೆ. ಅವುಗಳ ವಯಸ್ಸು ಸುಮಾರು 25ರಿಂದ 39 ವರ್ಷಗಳ ನಡುವೆ ಇದ್ದಿರಬಹುದು ಎಂದು ತಿಳಿಸಿದೆ. ಈ ಬುರುಡೆಗಳ ಮೇಲೆ ಯಾವುದೇ ರೀತಿಯ ಹಲ್ಲೆಯ ಗುರುತುಗಳು ಕಂಡುಬಂದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ನಂತರ ದೊರೆತ ಏಳು ಬುರುಡೆಗಳನ್ನು ಇನ್ನೂ ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ. ಈ ಪ್ರಕರಣವನ್ನು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಭಾಗವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.