ರಾಯಚೂರು: ನಮ್ಮ ಸ್ಥಾನ ಉಳಿಸಿಕೊಳ್ಳುವುದೇ ನಮಗೆ ಸಾಕಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಹೈಕಮಾಂಡ್ ಭೇಟಿ ಕುರಿತು ನಗರದಲ್ಲಿ ಮಾತನಾಡಿದ ಅವರು, ಪಕ್ಷದ ಕೆಲವರು ವರಿಷ್ಠರನ್ನು ಭೇಟಿ ಮಾಡಿರಬಹುದು, ಮಾಡಿದ್ದಾರೆ ಕೂಡ. ಸಂಪುಟ ವಿಸ್ತರಣೆ ಮಾಡುವುದು ಬಿಡುವುದು ಪಕ್ಷದ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದರು.
ಇನ್ನೂ ಸಂಪುಟ ವಿಸ್ತರಣೆ ಆಗುತ್ತೋ, ಪುನರ್ ರಚನೆ ಆಗುತ್ತೊ ಈ ಎರಡೂ ಗೊತ್ತಿಲ್ಲ. ನಾವು ಮಂತ್ರಿ ಮಂಡಲದ ಭಾಗವಷ್ಟೇ. ನಾವು ಯಾರನ್ನೋ ತೆಗೆದು, ಯಾರನ್ನೋ ಹಾಕಲು ಹೋಗುತ್ತಿಲ್ಲ. ನಮ್ಮ ಸ್ಥಾನ ಉಳಿಸಿಕೊಳ್ಳುವುದೇ ನಮಗೆ ಸಾಕಾಗಿದೆ. ರಾಜಕೀಯ ನಿಂತ ನೀರಲ್ಲ, ಹರಿಯುತ್ತಲಿರುತ್ತದೆ.
ಹಾಗೆಯೇ ಸರ್ಕಾರದಲ್ಲಿ ಅಪ್ಸ್ ಅಂಡ್ ಡೌನ್ಸ್ ಇರುತ್ತೆ. ಎಲ್ಲಾ ಸರ್ಕಾರ ಇದ್ದಾಗ ನಡೆಯುತ್ತಲಿರುತ್ತದೆ. ಬಿಜೆಪಿ ಇದ್ದಾಗಲೂ ಮೂರು ಸಿಎಂ ಬದಲಾದರು. ಮಂತ್ರಿಮಂಡಲ ಬದಲಾಯಿತು. ನಮ್ಮಲ್ಲಿ ಈವರೆಗೆ ಯಾವುದೂ ಚೇಂಜ್ ಅಗಿಲ್ಲ. ಎರಡು ವರ್ಷ ಗಟ್ಟಿಯಾಗಿದೆ. ಮುಂದೆ ಗೊತ್ತಿಲ್ಲ. ಶಾಶ್ವತವಾಗಿರಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.