ಚಿಕ್ಕಮಗಳೂರು: ಪುರುಷ ಪ್ರಾಧಾನ್ಯತೆಯ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿ, ಹೆಣ್ಣು ಮಕ್ಕಳೇ ತಮ್ಮ ತಂದೆಯ ಅಂತ್ಯಸಂಸ್ಕಾರ ನಡೆಸಿ ಲಿಂಗ ಸಮಾನತೆಯ ಸಂದೇಶ ಸಾರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಪಟ್ಟಣದಲ್ಲಿ ನಡೆದಿದೆ.
ಬೀರೂರು ಪಟ್ಟಣದ ಭಾವಸಾರ ಸಮಾಜದ ವಿಶ್ವನಾಥ ಅವರು ಗುರುವಾರ ನಿಧನರಾಗಿದ್ದರು. ಅವರಿಗೆ ಸ್ವಂತ ಮಕ್ಕಳಿರಲಿಲ್ಲ. ಅವರ ಸಹೋದರರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರು.
ಈ ಹಿನ್ನೆಲೆಯಲ್ಲಿ ವಿಶ್ವನಾಥ ಅವರ ಸಹೋದರನ ಮಗಳು ಐಶ್ವರ್ಯ ಅವರು, “ಅವರು ನನಗೆ ತಂದೆಯಂತಿದ್ದರು. ಆದ್ದರಿಂದ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನಾನು ನಡೆಸುತ್ತೇನೆ” ಎಂದು ಕುಟುಂಬದವರಿಗೆ ತಿಳಿಸಿದ್ದರು.
ಕುಟುಂಬದವರು ಹಾಗೂ ಭಾವಸಾರ ಸಮಾಜದ ಮುಖಂಡರು ಇದಕ್ಕೆ ಒಪ್ಪಿಗೆ ನೀಡಿದರು. ಅದರಂತೆ ಐಶ್ವರ್ಯ ಅವರು ತಮ್ಮ ಸಹೋದರಿ ಭಾವನಾ ಅವರೊಂದಿಗೆ ಸೇರಿ ಶುಕ್ರವಾರ ಅಂತ್ಯಕ್ರಿಯೆ ನೆರವೇರಿಸಿದರು.
ಹೆಗಲ ಮೇಲೆ ಕುಡಿಕೆ ಹೊತ್ತು ಮೃತದೇಹದ ಸುತ್ತ ಮೂರು ಸುತ್ತು ಹಾಕಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಅವರು, ಲಿಂಗ ಸಮಾನತೆಯ ಸಂದೇಶವನ್ನು ಸಮಾಜಕ್ಕೆ ಸಾರಿದರು.



