ತುಮಕೂರು: ಒಳಾಂಗಣ ಕ್ರೀಡಾಂಗಣಕ್ಕೆ ಡಾ.ಜಿ. ಪರಮೇಶ್ವರ್ ಹೆಸರು ಇಟ್ಟಿರುವುದರ ಬಗ್ಗೆ ರಾಜಕೀಯ ಚರ್ಚೆ ತೀವ್ರವಾಗಿರುವ ನಡುವೆಯೇ, ಗೃಹಸಚಿವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ಕ್ರೀಡಾಪಟು. ತುಮಕೂರಿಗೆ ಕೀರ್ತಿ ತಂದಿದ್ದೇನೆ. ಕ್ರೀಡಾಪಟುಗಳೇ ಸೇರಿ ನನ್ನ ಹೆಸರು ಇಟ್ಟಿದ್ದಾರೆ. ಇದಕ್ಕೆ ಯಾಕೆ ಕೆಲವರಿಗೆ ಹೊಟ್ಟೆ ಉರಿ?” ಎಂದು ಅವರು ಪ್ರಶ್ನಿಸಿದರು.
ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಜಿ. ಪರಮೇಶ್ವರ್ ಹೆಸರಿನ ನಾಮಫಲಕ ಅನಾವರಣಗೊಂಡಿತು. ಈ ಕಾರ್ಯಕ್ರಮವನ್ನು ತುಮಕೂರು ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯೋಜಿಸಿತ್ತು. ಕರ್ನಾಟಕ ಒಲಂಪಿಕ್ ಅಧ್ಯಕ್ಷ ಗೋವಿಂದರಾಜು ನಾಮಫಲಕ ಅನಾವರಣಗೊಳಿಸಿದರು. ಆಯುಕ್ತ ಚೇತನ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಅಶೋಕ್ ಕೆ.ವಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಪತ್ರಕರ್ತರೊಂದಿಗೆ ಮಾತನಾಡಿದ ಪರಮೇಶ್ವರ್,
“ನಾನು ಹೆಸರು ಇಡಲು ಯಾರಿಗೂ ಕೇಳಿಕೊಂಡಿಲ್ಲ. ಕ್ರೀಡಾಪಟುಗಳು ಸೇರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ನನಗೆ ಗೊತ್ತೇ ಇಲ್ಲದೆ ಈ ನಿರ್ಧಾರ ಆಗಿದೆ. ಒಂದು ಶೆಡ್ಗೆ ನನ್ನ ಹೆಸರು ಇಟ್ಟಿದ್ದರೂ ಅದನ್ನು ಸಹಿಸಲ್ಲಾ ಅಂದರೆ, ಎಂಥಾ ಜನ ನೀವು?” ಎಂದು ಬೇಸರ ವ್ಯಕ್ತಪಡಿಸಿದರು.
ಅವರು ತುಮಕೂರಿನ ಕ್ರೀಡಾ ಅಭಿವೃದ್ಧಿ ಕುರಿತು ಮಾತನಾಡುತ್ತ, ಜನವರಿ 16ರಿಂದ 22ರವರೆಗೆ ಕ್ರೀಡಾ ಕೂಟ ನಡೆಯಲಿದ್ದು, 16ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ, 22ರಂದು ರಾಜ್ಯಪಾಲರು ಸಮಾರೋಪಕ್ಕೆ ಬರಲಿದ್ದಾರೆ ಎಂದರು. ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ 27 ಕ್ರೀಡೆಗಳು ನಡೆಯಲಿದ್ದು, ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.
ಇನ್ನೊಂದು ಮಹತ್ವದ ಘೋಷಣೆಯಲ್ಲಿ, ತುಮಕೂರಿನಲ್ಲಿ 40 ಎಕರೆ ಭೂಮಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗುತ್ತಿದ್ದು, ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಜೊತೆಗೆ, “ತುಮಕೂರಿಗೆ ಮೆಟ್ರೋ ತರಬೇಕೆಂಬ ಸಂಕಲ್ಪ ನನ್ನದು” ಎಂದು ಹೇಳಿದರು.



