ಹಾವೇರಿ: ದರ್ಶನ್ ಬಳ್ಳಾರಿ ಸೆರೆವಾಸದ ಜೊತೆ ತಮ್ಮ ಹೆಸರು ಯಾಕೆ ಥಳುಕು ಹಾಕಿಕೊಳ್ಳುತ್ತಿದೆಯೋ ಗೊತ್ತಿಲ್ಲ, ಅವರ ಮತ್ತು ತನ್ನ ನಡುವೆ ಆತ್ಮೀಯ ಸ್ನೇಹವಿದೆ, ಇಲ್ಲ ಅಂತ ಹೇಳಲ್ಲ, ಆದರೆ ಅದೇ ಕಾರಣಕ್ಕೆ ಅವರೊಂದಿಗೆ ತನ್ನ ಹೆಸರು ಸೇರಿಸುವುದು ಸರಿಯಲ್ಲ, ನಾನು ದರ್ಶನ್ ಆತ್ಮೀಯ ಸ್ನೇಹಿತರು. ಆದ್ರೆ ದರ್ಶನ್ ತಪ್ಪು ಮಾಡಿದ್ದಕ್ಕೆ ಜೈಲಿಗೆ ಹೋಗಿದ್ದಾರೆ. ಸುಮ್ಮನೆ ಯಾರಾದರೂ ಜೈಲಿಗೆ ಹೋಗ್ತಾರಾ? ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ನಾವಿಬ್ಬರು ಸ್ನೇಹಿತರು ನಿಜ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ, ಜೈಲಿನಲ್ಲಿರುವ ಅವರಿಗೆ ಹೇಗೆ ಸಹಾಯ ಮಾಡಲು ಸಾಧ್ಯ?. ಬೆಂಗಳೂರು ಜೈಲಿನಲ್ಲಿ ವಿಶೇಷ ಆತಿಥ್ಯದ ಬಗ್ಗೆ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನನಗೂ ಈ ಕೇಸ್ಗೂ ಯಾವುದೇ ಸಂಬಂಧ ಇಲ್ಲ ಎಂದರು.
ಇನ್ನೂ ಮುಡಾದ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅಮಾನತು ವಿಚಾರ ಕುರಿತಂತೆ ಪ್ರತಿಕ್ರಿಯಿಸಿ, ದಿನೇಶ್ ಕುಮಾರ್ ಅವರನ್ನು ಟ್ರಾನ್ಸ್ಫರ್ ಮಾಡಿದ್ವಿ. ರಾಜ್ಯಪಾಲರು ಸಸ್ಪೆಂಡ್ ಮಾಡಿದ್ಧಾರೆಂದು ಮಾಧ್ಯಮ ಹೇಳುತ್ತಿದೆ. ನನಗೆ ಈ ಬಗ್ಗೆ ಗೊತ್ತಿಲ್ಲ. ಅದಕ್ಕೂ ಸಿಎಂ ಸಿದ್ದರಾಮಯ್ಯ ಅವರಿಗೂ ಏನು ಲಿಂಕ್ ಎಂದು ಪ್ರಶ್ನಿಸಿದ ಜಮೀರ್, ಇದಕ್ಕೂ ಮುಖ್ಯಮಂತ್ರಿಗೂ ಲಿಂಕ್ ಇಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ. ಮಾಹಿತಿ ತೆಗೆದುಕೊಂಡು ಹೇಳುತ್ತೇನೆ” ಎಂದು ತಿಳಿಸಿದರು.