ಹಾಸನ:- ಲವರ್ ಜೊತೆ ಹೆಂಡ್ತಿ ಎಸ್ಕೇಪ್ ಆದ ಹಿನ್ನೆಲೆ ಮನನೊಂದು ಪತಿಯೋರ್ವ ನದಿಗೆ ಹಾರಿ ಪ್ರಾಣಬಿಟ್ಟಿರುವ ಘಟನೆ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಾಕವಳ್ಳಿ ಗ್ರಾಮದ ಬಳಿ ನಡೆದಿದೆ.
38 ವರ್ಷದ ರವಿ ಆತ್ಮಹತ್ಯೆಗೆ ಶರಣಾದ ಪತಿ. ರವಿಯ ಪತ್ನಿ ಕೆಲ ದಿನಗಳ ಹಿಂದೆ ಗಂಡನನ್ನು ಬಿಟ್ಟು ಮಗುವಿನೊಂದಿಗೆ ಹೊನ್ನವಳ್ಳಿ ಗ್ರಾಮದ ಪ್ರದೀಪ್ ಜೊತೆ ಪರಾರಿಯಾಗಿದ್ದಳು. ಇದರಿಂದ ಮನನೊಂದ ರವಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸರಿಯಾಗಿ ಸ್ಪಂದಿಸದ ಕಾರಣ ಎಸ್ಪಿಗೂ ದೂರು ನೀಡಿದ್ದರು.
ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಮನನೊಂದ ರವಿ ಶನಿವಾರ ಮಾಕವಳ್ಳಿ ಬಳಿ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ರವಿಯ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.



