ವಿಜಯಸಾಕ್ಷಿ ಸುದ್ದಿ, ಡಂಬಳ: ಜೀವನದಲ್ಲಿ ಪರಿಸರ ಉಳಿಸಿ-ಬೆಳೆಸುವುದು ಪರಮ ಶ್ರೇಷ್ಠ ಕರ್ತವ್ಯವಾಗಿದ್ದು, ಗಿಡಗಳನ್ನು ಬೆಳೆಸುವ ಕಾರ್ಯ ಮತ್ತಷ್ಟು ಹೆಚ್ಚಬೇಕಿದೆ. ಅಂದಾಗ ಮಾತ್ರ ಉತ್ತಮ ವಾತಾವರಣ ನಮಗೆ ಸಿಗಲು ಸಾಧ್ಯ ಎಂದು ಮುಂಡರಗಿ ತಾಲೂಕಾ ಕಪ್ಪತ್ತಗುಡ್ಡ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ಹೇಳಿದರು.
ಡಂಬಳ ಹೋಬಳಿಯ ಶಿವಾಜಿನಗರ (ಶಿಂಗಟರಾಯನಕೆರಿ ತಾಂಡಾ) ರಾಷ್ಟ್ರೀಯ ಸೇವಾ ಯೋಜನಾ ಕೋಶ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಕನಕದಾಸ ಶಿಕ್ಷಣ ಸಮಿತಿಯ ಕೆ.ಎಸ್.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಎ ಮತ್ತು ಬಿ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ `ಅರಣ್ಯ ಸಂರಕ್ಷಣೆಯಲ್ಲಿ ಯುವಕರ ಪಾತ್ರ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಅರಣ್ಯ ಹಾಗೂ ವನ್ಯಜೀವಿಗಳು ಮನುಕುಲದ ಸಂಪತ್ತು. ಇದರ ಸಮೃದ್ಧಿಯಿಂದ ಪರಿಸರದಲ್ಲಿ ಸಮತೋಲವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಈ ಮೂಲಕ ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಹೊಂದಬಹುದು. ಈ ಭಾಗದಲ್ಲಿ ಅರಣ್ಯ ಪ್ರದೇಶ ಸಮೃದ್ಧಿಯಿಂದ ಕೂಡಿದೆ. ಆದರೆ ಕಪ್ಪತ್ತಗುಡ್ಡಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರು ಅರಣ್ಯ ಪ್ರದೇಶದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುತ್ತಿದ್ದಾರೆ. ಇದು ವನ್ಯಜೀವಿಗಳ ಜೀವಕ್ಕೆ ಸಂಚಕಾರ ತರಲಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಈ ಮೂಲಕ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಸರೋಜಾ ಪ್ರಕಾಶ ಪೂಜಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಲಕ್ಷ್ಮಣ ಕುಬೇರಸಿಂಗ್, ಡಾ. ಲಿಂಗರಾಜ ನಿಡವಣಿ, ಕುಮಾರಿ ಎನ್.ರಂಜನಿ, ಪ್ರೊ. ಪ್ರದೀಪ ನಾಯಕ, ಸೋಮನಾಥ ಭಿಮು ನಾಯಕ, ಭೀಮಸಿಂಗ್ ದೇವಲಾ ಕಾರಭಾರಿ, ಸೋಮಸಿಂಗ್ ಹಾಮಪ್ಪ ನಾಯಕ, ಶಿಬಿರದ ಸಂಚಾಲಕ ಪ್ರೊ. ವಾಯ್.ಬಿ. ರೇವಡಕುಂಡಿ ಸೇರಿದಂತೆ ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.