ವಿಜಯನಗರ:- ಭ್ರಷ್ಟಾಚಾರದಲ್ಲಿ ನನ್ನ ಕೈವಾಡ ಇದ್ರೆ ನೂರಕ್ಕೆ ನೂರರಷ್ಟು ರಾಜೀನಾಮೆ ನೀಡುತ್ತೇನೆ ಎಂಬ ವಸತಿ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಶಾಸಕ ಬಿ.ಆರ್ ಪಾಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಮೀರ್ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಏನು ಹೇಳಿದ್ದಾರೆ ಎನ್ನುವುದನ್ನು ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ. ಈ ಬಗ್ಗೆ ಜಮೀರ್ ಅವರು ನನ್ನ ಜೊತೆ ಮಾತನಾಡಿಲ್ಲ. ಯಾವ ಪಂಚಾಯತಿಯಲ್ಲಿ ಅವ್ಯವಹಾರ ಆಗಿದೆ ಎಂದು ಡಿಟೇಲ್ ಆಗಿ ಹೇಳಿದ್ದೇನೆ. ನಾನು ಕೇಳಿದ್ದು ಎರಡು ಸಾವಿರ ಮನೆ ಅಲ್ಲ, ಆರು ಸಾವಿರ ಮನೆ ಕೇಳಿದ್ದೇನೆ. ಮಾಗಡಿ ಶಾಸಕ ಬಾಲಕೃಷ್ಣ ಡಿಕೆ ಬ್ರದರ್ಸ್ ಆಶೀರ್ವಾದದಿಂದ ನನಗೆ ಅನುದಾನ ಸಿಗ್ತಿದೆ ಎಂದು ಹೇಳಿದ್ದಾರೆ. ನನಗೆ ಯಾರ ಆಶೀರ್ವಾದವೂ ಇಲ್ಲ, ಕೃಪಾಕಟಾಕ್ಷವೂ ಇಲ್ಲ. ಬಾಲಕೃಷ್ಣ ಅವರ ಕೇಸ್ ಬೇರೆ, ನನ್ನ ಕೇಸ್ ಬೇರೆ ಎಂದು ಹೇಳಿದರು.
ಇನ್ನೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಕರೆ ಮಾಡಿ ದೂರು ನೀಡುತ್ತಿದ್ದಾರೆ. ಹಂಪಿ ವಿವಿಗೆ ಬಂದಿದ್ದ ವೇಳೆಯೂ ವಸತಿ ನಿಗಮದ ಅಕ್ರಮದ ಕುರಿತು ಫೋನ್ನಲ್ಲಿ ಮಾತನಾಡುತ್ತಿದ್ದರು. ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ತುರಗಾನೂರು ಗ್ರಾಮದಿಂದ ಬಸನಗೌಡ ಪಾಟೀಲ್ ಎನ್ನುವ ವ್ಯಕ್ತಿ ಫೋನ್ ಮಾಡಿದ್ದರು. ಅಂಬೇಡ್ಕರ್ ವಸತಿ ನಿಗಮದ ಮನೆಗೆ 20 ಸಾವಿರ ರೂ. ಕೇಳುತ್ತಿದ್ದಾರೆ. ಬಸವ ವಸತಿ ಯೋಜನೆಯ ಮನೆಗೆ 15 ಸಾವಿರ ರೂ. ಕೇಳುತ್ತಿದ್ದಾರೆ ಎಂದು ಸಮಸ್ಯೆ ಹೇಳಿಕೊಂಡರು. ಬಹಳಷ್ಟು ಜನ ಫೋನ್ ಮಾಡುತ್ತಾರೆ, ನನಗೆ ಫೋನ್ ರಿಸೀವ್ ಮಾಡಿ ಸಾಕಾಗಿದೆ ಎಂದರು. ಸರ್ಕಾರ ನಮ್ಮ ನಡುವಿನದ್ದು, ಗಂಡ ಹೆಂಡತಿ ಜಗಳ ಇದ್ದ ಹಾಗೇ. ನಾಳೆ ಸಿಎಂ, ಡಿಸಿಎಂ ನನ್ನನ್ನು ಕರೆಸಿದ್ದಾರೆ. ಭೇಟಿಗೆ ಹೋಗುತ್ತೇನೆ, ನನ್ನ ಬೇಡಿಕೆಗಳು ಏನಿಲ್ಲ. ಮಾಧ್ಯಮಗಳ ಮುಂದೆ ಹೇಳಿದ್ದನ್ನೇ ಸಿಎಂ ಮುಂದೆ ಹೇಳುತ್ತೇನೆ ಎಂದರು.