ಬೆಂಗಳೂರು: ಮುಖ್ಯಮಂತ್ರಿಗಳು ಮೈಸೂರಿನ ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಅವರ ಹೆಸರನ್ನು ತೀರ್ಮಾನ ಮಾಡಿದ್ದಾರೆ. ಭಾನು ಮುಷ್ತಾಕ್ ಅವರು ನಮ್ಮ ಹಿಂದೂ ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳನ್ನು ಒಪ್ಪಿ, ಅದರ ಬಗ್ಗೆ ನಂಬಿಕೆ ಇಟ್ಟು ಬರುವುದಾದರೆ ನಾವು ಸ್ವಾಗತಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಮಾತನಾಡಿದ ಅವರು, ಭಾನು ಮುಷ್ತಾಕ್ ಮತ್ತು ಕೊಡಗಿನ ದೀಪಾ ಭಸ್ತಿ ಅವರು ಸೇರಿ ಇಬ್ಬರಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿದೆ. ರಾಜ್ಯ ಸರಕಾರವು ದಸರಾ ಉತ್ಸವಕ್ಕೆ ಭಾನು ಮುಷ್ತಾಕ್ ಜೊತೆಗೇ ಕೊಡಗಿನ ದೀಪಾ ಭಸ್ತಿ ಅವರನ್ನು ಕರೆಯಬಹುದಾಗಿತ್ತು. ಅವರನ್ನು ಕರೆಯಬೇಕೆಂದು ಸಿದ್ದರಾಮಯ್ಯನವರಿಗೆ ಯಾಕೆ ಅನಿಸಿಲ್ಲ? ಎಂದು ಕೇಳಿದರು. ಸಿದ್ದರಾಮಯ್ಯನವರಿಗೆ ಕೊಡಗಿನ ಬಗ್ಗೆ ಆಸಕ್ತಿ ಕಡಿಮೆಯೇ ಎಂದು ತಿಳಿಸಿದರು.
ಇಂಥ ವಿಚಾರದಲ್ಲಿ ಭಾನು ಮುಷ್ತಾಕ್ ಜೊತೆಗೇ ಕೊಡಗಿನ ದೀಪಾ ಭಸ್ತಿ ಅವರನ್ನು ಜೋಡಿಸಬಹುದಾಗಿತ್ತು ಎಂದು ನುಡಿದರು. ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವ ಕೆ. ಗೋಪಾಲಯ್ಯ, ಶಾಸಕ ಎಸ್.ಆರ್. ವಿಶ್ವನಾಥ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಹೆಚ್.ಸಿ. ತಮ್ಮೇಶ್ ಗೌಡ ಅವರು ಈ ಸಂದರ್ಭದಲ್ಲಿ ಇದ್ದರು.