ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಮತಕ್ಷೇತ್ರದ, ಗದಗ-ಬೆಟಗೇರಿ ಅವಳಿ ನಗರದ ಜನತೆ ಸುಮಾರು 40 ವರ್ಷಗಳಿಂದ ಕುಡಿಯುವ ನೀರಿಗಾಗಿ ಪರದಾಡುತದತಿದ್ದು, ಸಮಸ್ಯೆ ಇಂದಿಗೂ ಹಾಗೆಯೇ ಇದೆ. ಮಾನ್ಯ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲರು ಇಲ್ಲಿನ ನೀರಿನ ಸಮಸ್ಯೆಯನ್ನೇ ಬಗೆಹರಿಸದ ಸಚಿವರು ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ರಾಜಕಾರಣದ ವಿಷಯಗಳ ಕುರಿತು ಮಾರ್ಮಿಕವಾಗಿ ಮಾತನಾಡುತ್ತಾರೆ ಎಂದು ಬಿಜೆಪಿ ಗದಗ ಜಿಲ್ಲಾ ಅಧ್ಯಕ್ಷ ರಾಜು ಕುರುಡಗಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವರು ರಾಜಕಾರಣದಲ್ಲಿ ಪ್ರಭಾವಿಗಳು, ಕರ್ನಾಟಕದಲ್ಲಿ ಹೆಸರುವಾಸಿಯೂ ಆಗಿದ್ದಾರೆ. ಆದರೆ, ರಾಜಕಾರಣದ ಇಷ್ಟು ದಿನಗಳ ಸಾಧನೆಗಳು ಇರಲಿ, ಗದಗ ಮತಕ್ಷೇತ್ರದ ನೀರಿನ ಜ್ವಲಂತ ಸಮಸ್ಯೆಯನ್ನು ಮುಂದಿನ 6 ತಿಂಗಳ ಒಳಗಾಗಿ ಬಗೆಹರಿಸಲು ಸಾಧ್ಯವೇ? ಮುಖ್ಯಮಂತ್ರಿಗಳ ಆಪ್ತರಾದ ಸಚಿವರು ವಿಶೇಷ ಅನುದಾನ ತಂದು ನೀರಿನ ಜ್ವಲಂತ ಸಮಸ್ಯೆಯನ್ನು ಬಗೆಹರಿಸಿದರೆ ಹಾರ್ದಿಕವಾಗಿ ಅಭಿನಂದಿಸುತ್ತೇನೆ ಎಂದಿದ್ದಾರೆ.